ಕುಕ್ಕರ್ ಸ್ಫೋಟ: ಒಡಿಶಾದಲ್ಲಿ ವ್ಯಕ್ತಿ ಸೆರೆ
Team Udayavani, Jun 14, 2023, 7:19 AM IST
ಭುವನೇಶ್ವರ: ಕಳೆದ ವರ್ಷ ಮಂಗಳೂರಿನಲ್ಲಿ ಆಟೋದಲ್ಲಿ ನಡೆದ ಕುಕ್ಕರ್ ಸ್ಫೋಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಪ್ರೀತಮ್ ಕರ್ನನ್ನು (31) ಜೈಪುರ ಜಿಲ್ಲೆಯ ಭುರುಂಗ ಹಳ್ಳಿಯಲ್ಲಿ ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯದೆದುರು ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಸದ್ಯ ಬಂಧಿತನಾಗಿರುವ ಶಾರಿಕ್ಗೆ ಸಿಮ್ ಕಾರ್ಡ್, ಮೊಬೈಲ್ ನೀಡಿದ ಆರೋಪ ಆತನ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ 5ನೇ ವ್ಯಕ್ತಿ ಈತ.
2017ರಿಂದಲೇ ಅಕ್ರಮ ಚಟುವಟಿಕೆಯನ್ನು ಪ್ರೀತಮ್ ಮತ್ತವನ ಸಹಚರರು ಮಾಡಿಕೊಂಡು ಬರುತ್ತಿದ್ದಾರೆ. ಕದ್ದ ಮಾಹಿತಿಗಳನ್ನು ಬಳಸಿ ಸಿದ್ಧಪಡಿಸಿದ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದು, ಒಟಿಪಿಗಳನ್ನು ಹಂಚಿಕೊಳ್ಳುವುದು, ಸೈಬರ್ ಅಪರಾಧಿಗಳೊಂದಿಗೆ ಡಿಜಿಟಲ್ ವ್ಯಾಲೆಟ್ಗಳನ್ನು ಹಂಚಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಎರಡು ಬಾರಿ ಐಎಸ್ಐ ಏಜೆಂಟ್ಗಳನ್ನು ನೇರವಾಗಿ ಭೇಟಿ ಮಾಡಿ ಇತ್ತೀಚೆಗೆ 1.5 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ ಎಂದು ಒಡಿಶಾದ ವಿಶೇಷ ಕಾರ್ಯಪಡೆ ತಿಳಿಸಿದೆ.