ಜಮೀರ್ ಅಹಮದ್, ಸಹೋದರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಶಾಹಿಸ್ತಾ ನಜೀನ್ ಖಾನಮ್ ಎನ್ನುವವರ ಜಮೀನಿನ ಅತಿಕ್ರಮಣ ಮತ್ತು ಬೆದರಿಕೆ ಆರೋಪ
Team Udayavani, Feb 20, 2022, 6:03 PM IST
ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್, ಅವರ ಸಹೋದರ ಮತ್ತು ಇತರರ ವಿರುದ್ಧ ವಂಚನೆ, ಅತಿಕ್ರಮಣ ಮತ್ತು ಬೆದರಿಕೆಯ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.
ಏಳನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಇಲ್ಲಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಹಿಸ್ತಾ ನಜೀನ್ ಖಾನಮ್ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಜಮೀನು ಹೊಂದಿದ್ದರು. ಅವರು ಆಗಸ್ಟ್ 4 ರಂದು ಕಾರ್ಮಿಕರಿಗೆ ಶೆಡ್ ನಿರ್ಮಿಸಲು ಹೋದಾಗ, ಖಾನ್ ಅವರ ಸಹೋದರ ಜಮೀಲ್ ಅಹ್ಮದ್ ಖಾನ್ ಮತ್ತು ಇತರರು ತಮ್ಮ ಆಸ್ತಿಗೆ ಬುಲ್ಡೋಜರ್ ಮತ್ತು ಆಯುಧಗಳೊಂದಿಗೆ ಅತಿಕ್ರಮಣ ಮಾಡಿದರು ಮತ್ತು ಅಲ್ಲಿ ಏನನ್ನೂ ನಿರ್ಮಿಸದಂತೆ ಬೆದರಿಕೆ ಹಾಕಿದರು ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ.
ಖಾನಮ್ ಅವರ ಸಹೋದರಿ ತಸ್ನೀಮ್ ಫಾತಿಮಾ ಅವರು ವಿಶೇಷ ಅಧಿಕಾರವನ್ನು ಹೊಂದಿದ್ದು, ಅವರ ಸಹೋದರಿ ಯಲಹಂಕದಲ್ಲಿ 5,300 ಚದರ ಅಡಿಗಳಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು. ಕಳೆದ ವರ್ಷ ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದು ಅವರು ಹೇಳಿದರು.
ಜಮೀರ್ ಅಹಮದ್ ಖಾನ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.