ಕೊಲೆ ಕೇಸ್ : ರಾಮ್ ರಹೀಮ್ ಸಿಂಗ್ ಸೇರಿ ಐವರಿಗೆ ಜೀವಾವಧಿ ಶಿಕ್ಷೆ
Team Udayavani, Oct 18, 2021, 5:03 PM IST
ಪಂಚಕುಲ: ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥನಾಗಿದ್ದ ರಾಮ್ ರಹೀಮ್ ಸಿಂಗ್ ಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಡೇರಾ ಸಚ್ಚಾ ಸೌಧ ಅನುಯಾಯಿಯಾಗಿದ್ದ ರಂಜಿತ್ ಸಿಂಗ್ ಅವರನ್ನು 2002 ರ ಜುಲೈ 10 ರಂದು ಹತ್ಯೆಮಾಡಲಾಗಿತ್ತು. ಪ್ರಕರಣ ಕುರಿತು ತೀರ್ಪು ನೀಡಿದ್ದ ಸಿಬಿಐ ವಿಶೇಷ ಕೋರ್ಟ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ನೀಡಿತ್ತು. ರಾಮ್ ರಹೀಮ್ ಸಿಂಗ್ ಮಾತ್ರವಲ್ಲದ್ದೆ ಇತರ ಐವರು ಆರೋಪಿಗಳಿಗೂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೊಳಗಾದ ಇತರ ನಾಲ್ವರು ಅಪರಾಧಿಗಳು ಕೃಶನ್ ಲಾಲ್ , ಜಸ್ಬೀರ್ ಸಿಂಗ್, ಅವತಾರ್ ಸಿಂಗ್ ಮತ್ತು ಸಬ್ದಿಲ್.
ರಾಮ್ ರಹೀಮ್ ಸಿಂಗ್ ಗೆ 31 ಲಕ್ಷ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ. ಸಬ್ದಿಲ್ ಗೆ 1.5 ಲಕ್ಷ ರೂ., ಕೃಶನ್ ಲಾಲ್ , ಜಸ್ಬೀರ್ ಗೆ 1.25 ಲಕ್ಷ ರೂ.ದಂಡ ಮತ್ತು ಅವತಾರ್ ಗೆ 75,000.ದಂಡ ವಿಧಿಸಲಾಗಿದೆ.
ಈ ಹಣದಲ್ಲಿ ಅರ್ಧದಷ್ಟು ಹಣ ರಂಜಿತ್ ಸಿಂಗ್ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ರಂಜಿತ್ ಪುತ್ರ ಜಗ್ ಸೀರ್ ಸಿಂಗ್ ಅವರು ದೂರು ದಾಖಲಿಸಿದ್ದರು. 2003 ರ ಡಿಸೆಂಬರ್ 3 ರಂದು ಸಿಬಿಐ ಕೋರ್ಟ್ ಎಫ್ ಐ ಆರ್ ದಾಖಲು ಮಾಡಿಕೊಂಡಿತ್ತು.
ಈಗಾಗಲೇ ರಾಮ್ ರಹೀಮ್ ಇಬ್ಬರು ಭಕ್ತೆಯರ ಮೇಲೆ ಆಶ್ರಮದಲ್ಲಿ ಅತ್ಯಾಚಾರ ನಡೆಸಿದ ಆರೋಪದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 2017 ರಲ್ಲಿ ಸಿಬಿಐ ಕೋರ್ಟ್ ಶಿಕ್ಷೆ ವಿಧಿಸಿತ್ತು.