ಸಿಗಡಿ ಕೃಷಿಗೆ ಅವಕಾಶ ಕೊಡಬಾರದು: ಗ್ರಾಮಸ್ಥರ ಮನವಿ
Team Udayavani, Oct 21, 2021, 6:11 PM IST
ಭಟ್ಕಳ: ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕರಿಕಲ್ನಲ್ಲಿ ಯಾವುದೇ ಕಾರಣಕ್ಕೂ ಸಿಗಡಿ ಕ್ರಷಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಾರ್ವಜನಿಕರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಮನಿವಿಯಲ್ಲಿ ಕರಿಕಲ ಗ್ರಾಮದಲ್ಲಿ ಸಿಗಡಿ ಕೃಷಿಯನ್ನು ಮಾಡುವ ಬಗ್ಗೆ ನಮಗೆ ತಿಳಿದು ಬಂದಿದ್ದು ಇದರಿಂದ ಮುಂದೆ ಭಾರಿ ತೊಂದರೆಯಾಲಿದೆ. ಈಗಾಗಲೇ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯತ್ತಿದ್ದು ಅಪಾಯದ ಮುನ್ಸೂಚನೆಯಾಗಿದೆ. ಅಲ್ಲದೇ ಈ ಭಾಗದಲ್ಲಿ ಸಿಗಡಿ ಕೃಷಿ ಮಾಡುವುದೇ ಆದಲ್ಲಿ ನಮ್ಮ ವಿರೋಧವಿದ್ದು ಈ ಭಾಗದಲ್ಲಿ ನೂರಾರು ಮನೆಗಳು, ಶ್ರೀ ರಾಮ ಮಂದಿರ, ಭಜನಾ ಮಂದಿರ, ಶಾಲಾ ಆವರಣ, ಜೊತೆಗೆ ಮೀನುಗಾರರ ದೋಣಿಗಳನ್ನು ಇಡುವ ಸ್ಥಳವಾಗಿದ್ದು ಇಲ್ಲಿ ಸಿಗಡಿ ಕೃಷಿಯನ್ನು ಮಾಡಿದಲ್ಲಿ ಊರಿನ ವಾತಾವರಣವೇ ಹಾಳಾಗಲಿದೆ ಎಂದೂ ದೂರಿದ್ದಾರೆ.
ಸಿಗಡಿ ಕೃಷಿಯಿಂದ ಸಮುದ್ರದ ನೀರಿಗೂ ಹಾನಿಯಾಗುತ್ತದೆ ಎನ್ನುವ ಅವರು ಸಮುದ್ರದ ನೀರನ್ನು ಪಡೆದು ನಂತರ ವಿಷಪೂರಿತ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಜಲಚರಗಳಿಗೆ ಹಾನಿಯಾಗಲಿದೆ. ಮೀನಿನ ಸಂತತಿ ಕ್ಷೀಣಿಸುತ್ತಾ ನಂತರ ಮೀನುಗಾರರಿಗೆ ಕೂಡಾ ತೊಂದರೆಯಾಗಲಿರುವುದರಿಂದ ಗ್ರಾಮ ಪಂಚಾಯತ್ ವತಿಯಿಂದ ಸಿಗಡಿ ಕೃಷಿಗೆ ಪರವಾನಿಗೆ ಕೊಡಬಾರದು ಎಂದು ಆಗ್ರಹಿಸಲಾಗಿದೆ.
ಮನವಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಗೊಂಡ ಸ್ವೀಕರಿಸಿದರು. ಉಪಾಧ್ಯಕ್ಷ ದಾಸಾ ನಾಯ್ಕ ಉಪಸ್ಥಿತರಿದ್ದರು. ರಾಮಚಂದ್ರ ಮೊಗೇರ, ಶೇಖರ ಮೊಗೇರ, ಮಂಜುನಾಥ ಮೊಗೇರ, ಭೈರಾ ಮೊಗೇರ, ರಾಜಶೇಖರ ನಾಯ್ಕ, ನಾಗರಾಜ ನಾಯ್ಕ, ಮಾರುತಿ ಖಾರ್ವಿ, ನಾಗರಾಜ ಮೊಗೇರ ಮುಂತಾದವರು ಮನವಿಯನ್ನು ಜಂಟಿಯಾಗಿ ನೀಡಿದರು.