ಡಿಜಿಟಲ್ ಕಲಿಕೆಗೆ ಉತ್ತೇಜನ, 150 ಕೋಟಿ ರೂ. ವೆಚ್ಚದಲ್ಲಿ ಟ್ಯಾಬ್ಲೆಟ್ ನೀಡಲು ಕ್ರಮ: ಸಿಎಂ
Team Udayavani, Jan 12, 2021, 12:13 PM IST
ಬೆಂಗಳೂರು: ವಿದ್ಯಾರ್ಥಿಗಳ ಕಲಿಕೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಉತ್ತೇಜನಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನದ ರಾಷ್ಟ್ರೀಯ ಯುವ ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,150 ಕೋಟಿ ವೆಚ್ಚದಲ್ಲಿ ಟ್ಯಾಬ್ಲೆಟ್ ಗಳನ್ನ ನೀಡಲು ಸರ್ಕಾರ ಕ್ರಮವಹಿಸಿದೆ ಎಂದು ಹೇಳಿದರು.
ರಾಜ್ಯದ ಕಾಲೇಜುಗಳ ಅಭಿವೃದ್ಧಿಗೆ 430 ಕೋಟಿ ನೀಡಲಾಗಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಸೇರ್ಪಡೆಯಾಗಲೂ ಸಂಪೂರ್ಣ ಉಚಿತ ದಾಖಲಾತಿ ಮಾಡಲಾಗಿದೆ ಎಂದರು.
ಯುವ ಜನರಿಗಾಗಿ ಯುವ ಸ್ಪಂದನ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ವಿವೇಕಾನಂದರ ಆದರ್ಶಗಳನ್ನ ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ 100 ಅಂಕ ಕುಸಿತ, ನಿಫ್ಟಿ 14,450
ವಿವೇಕಾನಂದರು ತತ್ವಜ್ಞಾನಿಯಾಗಿದ್ದರು. ಚಾರಿತ್ರ್ಯ ನಿರ್ಮಾಣದಿಂದ ದೇಶದ ನಿರ್ಮಾಣ ಸಾಧ್ಯ ಎಂದವರು ವಿವೇಕಾನಂದರು. ಯುವ ಜನತೆ ರಾಜ್ಯ, ದೇಶದ ಆಸ್ತಿ. ರಾಷ್ಟ್ರದ ನಿರ್ಮಾಣಕ್ಕೆ ಯುವ ಜನತೆಯನ್ನ ತೊಡಗಿಸಿಕೊಳ್ಳುವ ಕೆಲಸ ದೇಶದಲ್ಲಿ ನಡೆಯುತ್ತಿದೆ ಎಂದರು.
ದೇಶ ಮೊದಲ ಸ್ಥಾನಕ್ಕೆ ಬರಬೇಕಾದರೆ ವಿವೇಕಾನಂದ ಮಾರ್ಗ ಅನುಸರಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಸಿಎಂ ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ಪ್ರದೀಪ್ ಇದ್ದರು.