ಪ್ರತಾಪ್ ಸಿಂಹ ವಿರುದ್ದ ರೈತರ ಕಿಡಿ: ತಂಬಾಕು ಮಂಡಳಿ ಅಧ್ಯಕ್ಷರಿಗೆ ಘೇರಾವ್
Team Udayavani, Oct 6, 2021, 6:58 PM IST
ಪಿರಿಯಾಪಟ್ಟಣ: ರೈತರ ಸಮಸ್ಯೆ ಆಲಿಸದೆ ಏಕಾಏಕಿ ಸಭೆಯಿಂದ ಎದ್ದು ಹೋದ ಸಂಸದ ಪ್ರತಾಪ್ ಸಿಂಹ ವರ್ತನೆಯನ್ನು ಖಂಡಿಸಿ ನೂರಾರು ರೈತರು ವೇದಿಕೆಗೆ ನುಗ್ಗಿ ಭಾರತೀಯ ತಂಬಾಕು ಮಂಡಳಿ ಅಧ್ಯಕ್ಷರಿಗೆ ಘೇರಾವ್ ಹಾಕಿದ ಘಟನೆ ಬುಧವಾರ ನಡೆಯಿತು.
ತಾಲೂಕಿನ ಬಹುದೊಡ್ಡ ತಂಬಾಕು ಹರಾಜು ಮಾರುಕಟ್ಟೆಯಾದ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ಸಭಾಂಗಣದಲ್ಲಿ ಭಾರತೀಯ ತಂಬಾಕು ಮಂಡಳಿಯ ಅಧ್ಯಕ್ಷ ರಘುನಾಥ್ ಬಾಬು ರವರೊಂದಿಗೆ ರೈತರ ಸಂವಾದ ಕಾರ್ಯಕ್ರಮನ್ನು ಆಯೋಜಿಸಲಾಗಿತ್ತು.
ಈ ಸಭೆಯನ್ನು 11 ಗಂಟೆಗೆ ನಿಗದಿಯಾಗಿ 1 ಗಂಟೆಯಾದರೂ ಸಭೆ ಆರಂಭವಾಗಿರಲಿಲ್ಲ, ಬೆಳಿಗ್ಗೆ 10 ಗಂಟೆಯಿಂದಲೇ ಹರಾಜು ಮಾರುಕಟ್ಟೆಯ ಆವರಣದಲ್ಲಿ ಸಭೆಗಾಗಿ ಕಾದುಕುಳಿತಿದ್ದರು. ಸಭೆ ಆರಂಭವಾದ ಕೂಡಲೇ ಏಕಾಏಕಿ ಸಂಸದ ಪ್ರತಾಪ್ ಸಿಂಹ ತಾವೇ ಮೊದಲು ಮೈಕ್ ಹಿಡಿದು ಆರ್.ಎಂಒ ಮಾರಣ್ಣನವರನ್ನು ತರಾಟೆಗೆ ತೆಗೆದುಕೊಂಡು ಕಳೆದ ಸೆ. 24ರಲ್ಲಿ ಹರಾಜು ಮಾರುಕಟ್ಟೆ ತರಾತುರಿಯಲ್ಲಿ ಆರಂಭವಾಗಲು ನೀವೆ ಕಾರಣ, ಶಾಸಕರು ಅಧಿವೇಶನದಲ್ಲಿದ್ದು ಅವರು ಬಂದ ಕೂಡಲೇ ಮಾರುಕಟ್ಟೆ ಆರಂಭಿಸಲು ಸೂಚಿಸಿದ್ದೆ ಆದರೆ ನೀವೇ ಮಾರುಕಟ್ಟೆ ಆರಂಭಿಸಲು ಸೆ.24 ಪ್ರಶಸ್ತವಾದ ದಿನ ಶುಭ ಶುಕ್ರವಾರ ಎಂದು ತರಾತು ರಿಯಲ್ಲಿ ಆರಂಭಿಸಿ ಈ ಬಗ್ಗೆ ರೈತರು ಆಕ್ಷೇಪ ಮತ್ತು ವಿರೋಧ ವ್ಯಕ್ತಪಡಿಸಿದಾಗ ಮತ್ತೊಮ್ಮೆ ರೈತರೊಂದಿಗೆ ತಂಬಾಕು ಮಂಡಳಿಯ ಅಧ್ಯಕ್ಷರನ್ನು ಕರೆದು ರೈತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಿ ಈ ದಿನ ಹುಣಸೂರಿನಲ್ಲಿ ಸಭೆ ನಡೆಸಿ ಅನೇಕ ನಿರ್ಣಯ ಮಾಡಿದ್ದೇವೆ ಅಲ್ಲಿ ಶಾಸಕರು ಇದ್ದರೂ ಮುಂಬರುವ ದಿನದಲ್ಲಿ ಅನಧಿಕೃತ ರೈತರ ಮೇಲೆ ವಿಧಿಸುವ ದಂಡವನ್ನು ಶೇಕಡ 10 ರಿಂದ 5 ಕ್ಕೆ ಇಳಿಸಲಾಗುವುದು, ಐಟಿಸಿ ಕಂಪನಿಗೆ ರೇಟ್ನೀಡಿ ಇಲ್ಲ ಎಂದರೆ ಮೈಸೂರಿನಿಂದ ಹೊರಡಿ, ನಾವು ರೈತರಿಗೆ ತಂಬಾಕು ಬೆಳೆಯುವುದನ್ನೇ ನಿಲ್ಲಿಸಲು ಹೇಳುತ್ತೇನೆ, ಎಂದರು . ಬಳಿಕ ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ರಾಷ್ಟ್ರಪತಿಗಳು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾನು ಮೈಸೂರಿಗೆ ತೆರಳಬೇಕು ಎಂದು ಸಭೆಯಿಂದ ಹೊರ ನಡೆದರು.
ಸಂಸದ, ಅಧಿಕಾರಿಗಳಿಗೆ ಧಿಕ್ಕಾರ
ಈ ಸಂದರ್ಭದಲ್ಲಿ ಆಕ್ರೋಶಗೊಂಡ ರೈತರು ಸಂಸದರು ಯಾವಾಗಲೂ ಹೀಗೆ ರೈತರ ಸಮಸ್ಯೆಗಳಿಗೆ ಸ್ಪಂಧಿಸುವುದಿಲ್ಲ ಮೊದಲೇ ಮಾತನಾಡಿ ಯಾರ ಅಭಿಪ್ರಾಯವನ್ನು ಆಲಿಸದೆ ಸಭೆಯಿಂದ ಓಡಿ ಹೋಗುತ್ತಾರೆ ಎಂದು ಸಂಸದ ಮತ್ತು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗುಲು ಆರಂಭಿಸಿದರು. ಈ ವೇಳೆ ಗದ್ದಲ ಆರಂಭವಾಗಿ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ರೈತರ ಸಮಸ್ಯೆ ಆಲಿಸಲು ತಾಳ್ಮೆ ತೋರದೆ ಸಭೆಯಿಂದ ಏಕಾಏಕಿ ಹೊರನಡೆದ ಸಂಸದರ ನಡೆಯನ್ನು ರೈತರು ವೇದಿಕೆಗೆ ನುಗ್ಗಿ ಖಂಡಿಸಿದರಲ್ಲದೆ. ಸಭೆಯನ್ನು ಮುನ್ನಡೆಸಲು ಮುಂದಾದ ಮಂಡಳಿಯ ಅಧ್ಯಕ್ಷ ರಘುನಾಥ್ ಬಾಬು , ಆರ್ ಎಂ ಓ ಮಾರಣ್ಣ, ಐಟಿಸಿ ಕಂಪನಿಯ ಮುಖ್ಯಸ್ಥ ರೆಡ್ಡಿ ಮುಂತಾದವರನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರಲ್ಲದೆ, ಸಂಸದರರು ಮತ್ತು ಅಧಿಕಾರಿಗಳಿಗೆಗೆ ಧಿಕ್ಕಾರ ಕೂಗಿದರು.
ಈ ವೇಳೆ ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ಕೆಲ ಕಂಪನಿಗಳ ಪರ ರೈತರು ಹೋರಾಟಕ್ಕೆ ಇಳಿದ ರೈತ ಮುಖಂಡರನ್ನು ಸಮಾಧಾನ ಪಡಿಸಿದರಲ್ಲದೆ ಚೇರ್ಮನ್ಸ್ ಸಭೆಯಲ್ಲಿ ಇರುವುದರಿಂದ ಸಭೆ ಮುಂದುವರೆಸುವಂತೆ ರೈತ ಮುಖಂಡರನ್ನು ಸಮಾಧಾನ ಪಡಿಸಿ ಸಭೆಯನ್ನು ಮಂಡಳಿಯ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮುಂದುವರೆಸಲಾಯಿತು.
ತಾಲೂಕಿನ ಪ್ರತಿ ಹರಾಜು ಮಾರುಕಟ್ಟೆ ವಾರದಲ್ಲಿ 2-3 ದಿನಗಳು ಭೇಟಿ ನೀಡುವೆ, ಅಲ್ಲದೆ ಕ್ಲಸ್ಟರ್ ಇರುವ ಗ್ರಾಮಗಳಿಗೆ ಖುದ್ದಾಗಿ ತೆರಳಿ ರೈತರ ಸಮಸ್ಯೆ ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಸಂಸದರ ಮಾತಿನ ಮದ್ಯೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ವಲಯ ವ್ಯವಸ್ಥಾಪಕ ಮಾರಣ್ಣ, ಐಟಿಸಿ ಕಂಪನಿಯ ಮುಖ್ಯಸ್ಥ ರೆಡ್ಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.