ಡ್ರಗ್ಸ್ ಮಟ್ಟಹಾಕದೆ ಹೋದರೆ ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ: ಖಂಡ್ರೆ
Team Udayavani, Sep 15, 2020, 2:34 PM IST
ಬೆಂಗಳೂರು: ಡ್ರಗ್ಸ್ ಮಾಫಿಯಾ ಮಟ್ಟಹಾಕದೆ ಹೋದರೆ ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ. ಡ್ರಗ್ಸ್ ತಡೆಯಲು ಎಲ್ಲರೂ ಕೈಜೋಡಿಸಬೇಕು. ಸಮಾಜಘಾತುಕ ವಿಚಾರಗಳನ್ನ ತಡೆಗಟ್ಟಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಪಿಡುಗಿನಿಂದ ನಮ್ಮ ಯುವಕರು ಹಾಳಾಗುತ್ತಿದ್ದಾರೆ. ಇದರಿಂದ ಅವರ ಬದುಕು ಕಗ್ಗತ್ತಲಾಗಿದೆ. ಡ್ರಗ್ಸ್ ತಡೆಯಲು ಪಕ್ಷಾತೀತವಾಗಿ ಕೈಜೋಡಿಸಬೇಕಿದೆ. ಡ್ರಗ್ ತಡೆಗಾಗಿ ವಿಶೇಷ ತನಿಖಾ ತಂಡವನ್ನ ರಚಿಸಬೇಕು. ವ್ಯಸನಿಗಳನ್ನ ಸರಿಪಡಿಸುವ ಕೇಂದ್ರಗಳನ್ನ ತರಬೇಕು ಎಂದರು.
ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ರೇವ್ ಪಾರ್ಟಿಗಳು ಮುಂದುವರಿಯುತ್ತಿವೆ. ಡ್ರಗ್ಸ್ ಯಾರು ತಯಾರು ಮಾಡ್ತಿದ್ದಾರೆ. ಯಾರು ಸರಬರಾಜು ಮಾಡುತ್ತಿದ್ದಾರೂ, ಕಳ್ಳ ಸಾಗಾಣಿಕೆ ಯಾರು ಮಾಡ್ತಿದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ದೇಶದ ಅಭಿವೃದ್ಧಿಗಾಗಿ ಇಂಜಿನಿಯರ್ ಗಳು ವಿಶ್ವೇಶ್ವರಯ್ಯ ಅವರ ಮಾದರಿಯಲ್ಲಿ ಶ್ರಮಿಸಿ; ಕಾರಜೋಳ
ಸಂಸತ್ ಅಧಿವೇಶನ ಪ್ರಾರಂಭವಾಗಿದೆ. ಮುಂದಿನ 21ರಿಂದ ವಿಧಾನಸಭೆ ಅಧಿವೇಶನವೂ ನಡೆಯಲಿದೆ. ವಿವಾದಾತ್ಮಕ ಕಾಯ್ದೆ ಜಾರಿಗೆ ತರುವುದನ್ನ ಬಿಡಿ, ಡ್ರಗ್ಸ್ ಪಿಡುಗಿನ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ಕೊಡಿ, ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ನಿರ್ಧರಿಸಿ ಎಂದು ಸರ್ಕಾರಕ್ಕೆ ಖಂಡ್ರೆ ಒತ್ತಾಯಿಸಿದರು.
ಡ್ರಗ್ಸ್ ದಂಧೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಮಾದಕ ವಸ್ತು ಪೂರೈಕೆದಾರರಿಗೆ 20 ವರ್ಷ ಶಿಕ್ಷೆ ನೀಡಬೇಕು ಎಂದರು.
ಮಾಜಿ ಸಚಿವ ಜಮೀರ್ ಅಹಮದ್ ಡ್ರಗ್ಸ್ ಆರೋಪದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನಆಸ್ತಿ ಪಾಸ್ತಿಜಪ್ತಿ ಮಾಡಿ ಅಂದಿದ್ದಾರೆ. ಅದರ ಬಗ್ಗೆ ಇನ್ನೇನು ಹೇಳಬೇಕು ಎಂದು ಪ್ರಶ್ನಿಸಿದರು.
ಸಿ.ಟಿ. ರವಿಯವರಿಗೆ ಮಾನ ಮರ್ಯಾದೆ ಇದೆಯಾ? ರಾಜ್ಯದಲ್ಲಿ ಕ್ಯಾಸಿನೋ ತರೋಕೆ ಹೊರಟವರು ಅವರು. ಕ್ಯಾಸಿನೋ ಬಗ್ಗೆ ಮಾತನಾಡ್ತಾರೆ ಅಂದರೆ ಹೇಗೆ ಎಂದು ಸಚಿವ ಸಿ.ಟಿ.ರವಿ ವಿರುದ್ಧ ಈಶ್ವರ್ ಖಂಡ್ರೆ ಗುಡುಗಿದರು.