ರಸ್ತೆಗಳು ಸರಿಯಾಗುವವರೆಗೆ ಪಾದರಕ್ಷೆ ಧರಿಸುವುದಿಲ್ಲ; ಪ್ರತಿಜ್ಞೆಗೈದ ಸಚಿವ
ಹುಟ್ಟೂರ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕ್ಷಮೆ ಯಾಚಿಸಿದ ಸಚಿವ...
Team Udayavani, Oct 22, 2022, 7:45 PM IST
ಗ್ವಾಲಿಯರ್ : ದೇಶದ ವಿವಿಧೆಡೆ ರಸ್ತೆ ಗಳ ಸಮಸ್ಯೆ ಸಾಮಾನ್ಯವಾಗಿದ್ದು, ಆಡಳಿತ ಪಕ್ಷದ ಸದಸ್ಯರೊಬ್ಬರೇ, ಅದೂ ಉನ್ನತ ಸ್ಥಾನದಲ್ಲಿದ್ದು ಪ್ರತಿಜ್ಞೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಮಧ್ಯಪ್ರದೇಶದ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು ತಮ್ಮ ಹುಟ್ಟೂರಾದ ಗ್ವಾಲಿಯರ್ನಲ್ಲಿ ರಸ್ತೆಗಳ ದುಃಸ್ಥಿತಿಯಿಂದ ಬೇಸರಗೊಂಡಿದ್ದು ಪಾದರಕ್ಷೆಗಳನ್ನು ಬಳಸುವುದನ್ನು ನಿಲ್ಲಿಸಿದ್ದು, ರಸ್ತೆಯ ಸ್ಥಿತಿ ಸುಧಾರಿಸುವವರೆಗೆ ಬರಿಗಾಲಿನಲ್ಲೇ ನಡೆಯುವುದಾಗಿ ಘೋಷಿಸಿದ್ದಾರೆ.
ರಸ್ತೆಯಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕ್ಷಮೆ ಯಾಚಿಸಿದ ಇಂಧನ ಸಚಿವ ತೋಮರ್, “ಹದಗೆಟ್ಟ ರಸ್ತೆಗಳಿಂದಾಗಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವ ನೋವನ್ನು ನಾನೂ ಅನುಭವಿಸಬೇಕು ಮತ್ತು ರಸ್ತೆಗಳು ಮತ್ತೆ ನಡೆಯಲು ಯೋಗ್ಯವಾಗುವವರೆಗೆ ನಾನು ಪಾದರಕ್ಷೆಗಳನ್ನು ಬಳಸುವುದಿಲ್ಲ” ಎಂದು ಗುರುವಾರ ಹೇಳಿದ್ದಾರೆ.
ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಗೆ ಸರಕಾರ ಹಣ ಮಂಜೂರು ಮಾಡಿದ್ದರೂ ಪೌರಕಾರ್ಮಿಕರು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಕಿಡಿ ಕಾರಿದ್ದಾರೆ.