ಉತ್ತರಾಖಂಡ್ ನಲ್ಲಿ ಬಿಜೆಪಿ ಜಯಭೇರಿ ಆದರೆ ಸಿಎಂ ಪುಷ್ಕರ್ ಗೆ ಸೋಲು;CM ಆಕಾಂಕ್ಷಿ ಸಿಧು ಪರಾಜಯ
ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಚಮ್ ಕೌರ್ ಸಾಹೀಬ್ ಮತ್ತು ಭಾದೌರ್ ಕ್ಷೇತ್ರಗಳಲ್ಲಿ ಸೋಲನ್ನನುಭವಿಸಿದ್ದಾರೆ.
Team Udayavani, Mar 10, 2022, 5:08 PM IST
ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 90 ಸ್ಥಾನಗಳಲ್ಲಿ ಗೆಲುವಿನ ದಾಪುಗಾಲಿಡುವ ಮೂಲಕ ಅಧಿಕಾರದ ಗದ್ದುಗೆಗ ಹಿಡಿಯಲು ಸಜ್ಜಾಗಿದೆ. ಮತ್ತೊಂದೆಡೆ ಪಂಜಾಬ್ ವಿಧಾನಸಭಾ ಅಖಾಡದಲ್ಲಿ ಘಟಾನುಘಟಿಗಳು ಪರಾಜಯಗೊಂಡಿದ್ದಾರೆ.
ಇದನ್ನೂ ಓದಿ:ಜನರು ನನ್ನ ಜೀವನದ ಆಯ್ಕೆಯನ್ನು ಅನುಸರಿಸುವುದು ನನಗೆ ಇಷ್ಟವಿಲ್ಲ; ಸನ್ನಿ ಲಿಯೋನ್
ಶಿರೋಮಣಿ ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ , ಕ್ಯಾಪ್ಟನ್ ಅಮರೀಂದರ್ ಸಿಂಗ್, ಸುಕ್ಬೀರ್ ಬಾದಲ್, ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ, ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದ ನವಜ್ಯೋತ್ ಸಿಂಗ್ ಸಿಧು ಪರಾಜಯಗೊಂಡಿದ್ದಾರೆ.
ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಚಮ್ ಕೌರ್ ಸಾಹೀಬ್ ಮತ್ತು ಭಾದೌರ್ ಕ್ಷೇತ್ರಗಳಲ್ಲಿ ಸೋಲನ್ನನುಭವಿಸಿದ್ದಾರೆ. ಸುಕ್ಬೀರ್ ಸಿಂಗ್ ಬಾದಲ್ ಜಲಾಲಾಬಾದ್ ಕ್ಷೇತ್ರದಲ್ಲಿ ಪರಾಜಯಗೊಂಡಿದ್ದು, ಪಂಜಾಬ್ ಪ್ರದೇಶ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಅಮೃತ್ ಸರ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸೋಲನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ರಾಜ್ಯದಲ್ಲಿ ಜನರ ತೀರ್ಪನ್ನು ಸ್ವೀಕರಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ತಿಳಿಸಿದ್ದು, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಚನ್ನಿ ತಿಳಿಸಿದ್ದಾರೆ.
ಉತ್ತರಾಖಂಡ್ ನಲ್ಲಿ ಬಿಜೆಪಿ ಜಯಭೇರಿ ಆದರೆ ಸಿಎಂ ಪುಷ್ಕರ್ ಗೆ ಸೋಲು!
70 ಸದಸ್ಯಬಲದ ಉತ್ತರಾಖಂಡ್ ವಿಧಾನಸಭೆಯ ಚುನಾವಣೆಯ ಮತಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ದವಾಗಿದೆ. ಆದರೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಪರಾಜಯಗೊಂಡಿದ್ದಾರೆ.
ಜೀ ನ್ಯೂಸ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಉತ್ತರಾಖಂಡ್ ನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯಲಿದೆ ಎಂದು ತಿಳಿಸಿತ್ತು. ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ 35ರಿಂದ 40 ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. ಆಡಳಿತಾರೂಢ ಬಿಜೆಪಿ 25ಕ್ಕಿಂತ ಅಧಿಕ ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು.
2017ರಲ್ಲಿ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 56 ಸ್ಥಾನಗಳಲ್ಲಿ, ಕಾಂಗ್ರೆಸ್ 11 ಹಾಗೂ ಇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ, ಕಾಂಗ್ರೆಸ್ 18 , ಇತರರು 04 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.