ಭಕ್ತಾದಿಗಳ ನಿಷೇಧದ ನಡುವೆಯೂ ಮಾದಪ್ಪನಿಗೆ ಸಾಂಪ್ರದಾಯಿಕ ಹಾಲರುವೆ ಉತ್ಸವ
Team Udayavani, Nov 15, 2020, 7:12 PM IST
ಹನೂರು: ಭಕ್ತಾದಿಗಳ ನಿಷೇಧದ ನಡುವೆಯೂ ಮಲೆ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರಾ ಮಹೋತ್ಸವದ ಹಾಲರವೆ ಉತ್ಸವ ಮತ್ತು ಅಮಾವಾಸ್ಯೆ ಪೂಜಾ ಕೈಂಕರ್ಯಗಳು ಬೇಡಗಂಪಣ ಅರ್ಚಕ ವೃಂದ, ಪ್ರಾಧಿಕಾರದ ಅಧಿಕಾರಿ ವರ್ಗ ಮತ್ತು ಸ್ಥಳೀಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿದವು.
ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ, ತ್ರಿಕಾಲ ಅಭಿಷೇಕ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿದವು. ಬಳಿಕ ಮಾದಪ್ಪನಿಗೆ ರುದ್ರಾಭಿಷೇಕ, ವಿಭುತಿ ಅಭಿಷೇಕ ಮತ್ತು ಬಿಲ್ವಾರ್ಚನೆ ಸೇರಿದಂತೆ ವಿವಿಧ ಅಭಿಷೇಕಗಳನ್ನು ಬೇಡಗಂಪಣ ಅರ್ಚಕರು ನೆರವೇರಿಸಿದರು.
ಇದನ್ನೂ ಓದಿ:ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೂ ಕೋವಿಡ್ ಪಾಸಿಟಿವ್!
ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆ ಬೇಡಗಂಪಣ ಸಮುದಾಯದ 108 ಹೆಣ್ಣುಮಕ್ಕಳು ಬೆಳ್ಳಂಬೆಳಗ್ಗೆಯೇ ದಟ್ಟಡವಿಯ ಮಧ್ಯೆ ಸಾಗಿ ಮಲೆ ಮಹದೇಶ್ವರರ ಪರಮ ಶಿಷ್ಯರಾದ ಕಾರ್ಯ್ಯ ಮತ್ತು ಬಿಲ್ಲಯ್ಯ ಮಡುವನ್ನು ತಲುಪಿದ್ದರು. ಬಳಿಕ ಪವಿತ್ರ ಸ್ನಾನ ಮಾಡು ಹಾಲರುವೆ ಗುಂಬಗಳಿಗೆ ಧೂಪ-ದೀಪಗಳೊಂದಿಗೆ ಮಂಗಳಾರತಿ ಪೂಜೆಗಳನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ಬಳಿಕ ಬೇಡಗಂಪಣ ಅರ್ಚಕರಿಉಂದ ಕತ್ತಿ ಪವಾಡ ಸೇವೆ ನೆರವೇರಿಸಲಾಯಿತು. ಬಳಿಕ ಸತ್ತಿಗೆ-ಸುರಪಾನಿ, ತಮಟೆ, ಮಂಗಳ ವಾದ್ಯ ನಂದಿಕಂಬ, ಜಾಗಟೆ ಸಮೇತ ದೇವಾಲಯವನ್ನು ತಲುಪಿ ಮಾಯ್ಕಾರ ಮಾದಪ್ಪನಿಗೆ ಮಜ್ಜನ ಸೇವೆ ನೆರವೇರಿಸಲಾಯಿತು.
ಭಕ್ತಾದಿಗಳಿಗೆ ನಿಷೇಧ: ಕೊರೋನಾ ಮಹಾಮಾರಿ ಹಿನ್ನೆಲೆ ಈ ಬಾರಿಯ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳ ಪ್ರವೇಶವನ್ನು 4 ದಿನಗಳ ಕಾಲ ನಿಷೇಧಿಸಲಾಗಿದೆ. ಅಲ್ಲದೆ ಪ್ರತಿ ಬಾರಿಯೂ ಬಲಿಪಾಡ್ಯಮಿ ದಿನದಂದು ಮಹಾರಥೋತ್ಸವ ಜರುಗುತಿತ್ತು. ಈ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದ ಭಕ್ತಾದಿಗಳ ದಂಡೇ ಹರಿದುಬರುತಿತ್ತು. ಪ್ರತಿ ಬಾರಿಯೂ ಮಹಾರಥೋತ್ಸವದಲ್ಲಿ 4 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಶ್ರೀ ಕ್ಷೇತ್ರದಲ್ಲಿ ಮಹಾರಥೋತ್ಸವವು ರದ್ದಾಗಿದೆ.