ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ
Team Udayavani, Jun 15, 2021, 8:38 PM IST
ಮಂಡ್ಯ: ಕುಡಿದ ಅಮಲಿನಲ್ಲಿ ಅಣ್ಣನೊಬ್ಬ ತಮ್ಮನನ್ನೇ ಕಲ್ಲಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ಶಂಕರ್ ಅವರ ಪುತ್ರರಾದ ಚಂದನ್(22) ಕೊಲೆಯಾದ ದುರ್ದೈವಿ. ಅಣ್ಣ ಅಭಿಷೇಕ್(24) ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇಬ್ಬರೂ ಅಣ್ಣ-ತಮ್ಮಂದಿರಾಗಿದ್ದು, ಅಣ್ಣ ಅಭಿಷೇಕ್ ಗ್ರಾಮದಲ್ಲಿಯೇ ವ್ಯವಸಾಯ ಮಾಡುತ್ತಿದ್ದು. ತಮ್ಮ ಚಂದನ್ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗೆ ಮೂರು ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದು. ಇಬ್ಬರೂ ಕುಡಿತಕ್ಕೆ ದಾಸರಾಗಿದ್ದರು. ರಾತ್ರಿ ವೇಳೆ ಕುಡಿದು ಬಂದು ಗಲಾಟೆ ಮಾಡಿಕೊಳ್ಳುತ್ತಿದ್ದರು.
ಅದರಂತೆ ಸೋಮವಾರ ರಾತ್ರಿಯೂ ೭.೩೦ರ ಸಮಯದಲ್ಲಿ ಕುಡಿದು ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ತಂದೆ-ತಾಯಿ ಸೇರಿದಂತೆ ಗ್ರಾಮಸ್ಥರು ಬಿಡಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ಕುಡಿದ ಮತ್ತಿನಲ್ಲಿದ್ದ ಅಣ್ಣ ಅಭಿಷೇಕ್ ಕಲ್ಲಿನಿಂದ ತಮ್ಮ ಚಂದನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಚಂದನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಮ್ಮ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಅಣ್ಣ ಅಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ :ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ
ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.