ಮೂರು ಸಾವಿರ ಮಠದಲ್ಲಿ ಕಳ್ಳತನ ಮಾಡಲು ಬಂದ ವ್ಯಕ್ತಿಯಿಂದ ಸ್ವಾಮಿಗಳ ಕೊಲೆಗೆ ಯತ್ನ
Team Udayavani, May 20, 2020, 9:51 AM IST
ಬೆಳಗಾವಿ/ಬೈಲಹೊಂಗಲ: ಬೈಲಹೊಂಗಲ ತಾಲೂಕಿನ ಮೂರು ಸಾವಿರ ಶಾಖಾ ಮಠದಲ್ಲಿ ಮಂಗಳವಾರ ಮಧ್ಯರಾತ್ರಿ ಕಳ್ಳತನ ನಡೆಸಲು ಬಂದಿದ್ದ ವ್ಯಕ್ತಿಗೆ ಪ್ರತಿರೋಧ ವ್ಯಕ್ತಪಡಿಸಿದ್ದ ಶ್ರೀ ಗಂಗಾಧರ ಸ್ವಾಮೀಜಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ.
ಕಳ್ಳನ ಹಲ್ಲೆಯಿಂದಾಗಿ ಶ್ರೀ ಗಂಗಾಧರ ಸ್ವಾಮೀಜಿ ಗಂಭೀರ ಗಾಯಗೊಂಡಿದ್ದಾರೆ. ಮಠದಲ್ಲಿ ಕಳ್ಳತನ ಮಾಡಲು ಬಂದಿದ್ದ ಇದೇ ಗ್ರಾಮದ ಮಲ್ಲಿಕಾರ್ಜುನ ಮಹಾದೇವಪ್ಪ ಬುಡಶೆಟ್ಟಿ ಎಂಬಾತ ಸ್ವಾಮಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.
ತಲೆಗೆ ಹಾಗೂ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಕೂಡಲೇ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ.
ಕಳ್ಳನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತನ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ಈತನ ಮೇಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕುರಿತು ಇನ್ನಷ್ಟು ಸತ್ಯಾಂಶ ಹೊರ ಬರಬೇಕಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.