ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ
Team Udayavani, Nov 28, 2022, 1:04 PM IST
ಬೆಂಗಳೂರು: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನವನ್ನು ತಿರುಚಿದ ಅಪಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಹೀಗಾಗಿ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಕಾಂಗ್ರೆಸ್ ಪಕ್ಷದಿಂದಾಗಲಿ ಅಥವಾ ಸಿದ್ದರಾಮಯ್ಯ ಅವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಸಂವಿಧಾನ ತಿರುಚಿದ್ದು ಯಾವ ಪಕ್ಷ ಎಂದು ಪ್ರಶ್ನೆ ಮಾಡಿದ್ದರು.
ಸಂವಿಧಾನಕ್ಕೆ ಬಿಜೆಪಿ ಯಾವಾಗಲು ಅತ್ಯಂತ ಹೆಚ್ಚು ಗೌರವ ನೀಡುವ ರಾಜಕೀಯ ಪಕ್ಷವಾಗಿದೆ. ಮೊದಲು ಕಾಂಗ್ರೆಸ್ ನವರು ಸಂವಿಧಾನಕ್ಕೆ ಗೌರವ ನೀಡುವುದನ್ನು ಕಲಿಯಲಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ
ನವದೆಹಲಿಗೆ ತೆರಳುತ್ತಿದ್ದು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರನ್ನು ಭೇಟಿಯಾಗಬೇಕೆಂದು ತೀರ್ಮಾನಿಸಿದ್ದೇನೆ. ಅವರು ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಕಾರಣ ನನಗೆ ಇನ್ನು ಭೇಟಿಗೆ ಸಮಯ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು.
ದೆಹಲಿಗೆ ಹೋದಾಗ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಿ ಕಾನೂನು ಹೋರಾಟಗಳ ಬಗ್ಗೆ ಚರ್ಚಿಸಲಾಗುವುದು. ಡಿಸೆಂಬರ್ ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದೆ. ನಮ್ಮ ರಾಜ್ಯದ ನಿಲುವು ಏನಾಗಬೇಕು ಎಂಬುದರ ಕುರಿತು ಮಾಹಿತಿ ನೀಡಲಿದ್ದೇನೆ. ಗಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಿಎಂ ಪುನರುಚ್ಚರಿಸಿದರು.