ವಸತಿ ನಿಲಯ ಕಾರ್ಮಿಕರಿಗೆ ಇಪಿಎಫ್ ಸೌಕರ್ಯಕ್ಕೆ ಆಗ್ರಹಿಸಿ ಅಹೋರಾತ್ರಿ ಹೋರಾಟ
Team Udayavani, Feb 4, 2021, 8:49 PM IST
ಯಾದಗಿರಿ: ಜಿಲ್ಲೆಯ ಸಮಾಜ ಕಲ್ಯಾಣ, ಪ.ಪಂ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಾರ್ಯನರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಇಪಿಎಫ್ ಮತ್ತು ಇಎಸ್ಐ ಸೌಕರ್ಯಗಳನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಅನಿರ್ಧಿಷ್ಟ ಅಹೋರಾತ್ರಿ ಹೋರಾಟ ಆರಂಭವಾಗಿದೆ.
ಜಿಲ್ಲಾಡಳಿತ ಭವನದ ಎದುರು ಹೋರಾಟ ಆರಂಭಿಸಲಾಗಿದ್ದು ಕಾರ್ಮಿಕರು 2010ರಿಂದ 2020ರವರೆಗಿನ ಎಪಿಎಫ್ ಮತ್ತು ಇಎಸ್ಐ ದಾಖಲೆ ನೀಡುವುದು ಹಾಗೂ ಬಾಕಿ ವೇತನವನ್ನು ಬಿಡುಗಡೆಗೊಳಿಸಿ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ.
ಕಾರ್ಮಿಕರ ಇಪಿಎಫ್ ಮತ್ತು ಇಎಸ್ಐ ಪಾವತಿ ಕುರಿತು ಗುತ್ತಿಗೆ ಸಂಸ್ಥೆಗಳು ನಿರ್ಲಕ್ಷವಹಿಸಿದ್ದು, ಹಾಗಾಗಿ ಕಾರ್ಮಿಕರಿಗೆ ಸುರಕ್ಷತೆಯಿಲ್ಲದಂತಾಗಿದೆ ಎಂದು ದೂರಿದರು.
ಇದನ್ನೂ ಓದಿ:ಪದ್ಮಶ್ರೀ ಪ್ರಶಸ್ತಿ ಕನ್ನಡ ಜನತೆಗೆ ಅರ್ಪಣೆ: ಮಂಜಮ್ಮ ಜೋಗತಿ
ಈ ಬಗ್ಗೆ 2019ರ ನ.19ರಂದು ಜಿ.ಪಂ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯ ಸಭೆಯಲ್ಲಿ 15 ದಿನಗಳಲ್ಲಿ ಮಾಹಿತಿ ನೀಡಲು ಸೂಚಿಸಲಾಗಿತ್ತು. ಆದರೇ ಈವರೆಗೆ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳಿನಿಂದ ವೇತನವಿಲ್ಲ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಗುತ್ತಿಗೆ ಕಾರ್ಮಿಕರಿಗೆ 2020ರ ಮಾರ್ಚ್, ಎಪ್ರಿಲ್, ಮೇ, ತಿಂಗಳ ಹಾಗೂ ನವೆಂಬರ್, ಡಿಸೆಂಬರ್ ತಿಂಗಳ ಪಾವತಿಯಾಗದ ವೇತನ ತಕ್ಷಣವೇ ನೀಡಲು ಒತ್ತಾಯಿಸಲಾಯಿತು.
ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ
ಬೇಕಿ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ನಿರಂತರವಾಗಿ ನಡೆಯುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಹೇಳಿದರು.
ಧರಣಿಯಲ್ಲಿ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ರಾಮಲಿಂಗಪ್ಪ ಬಿ.ಎನ್., ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದಾರೆ.