ಕುಮ್ಕಿ, ಜಮಾಬಾಣೆ ಮೊದಲಾದ ಭೂ ಗೊಂದಲ ಸರಿಪಡಿಸಲು ಸಮಿತಿ ರಚನೆ: ಆರ್.ಅಶೋಕ್
Team Udayavani, Mar 10, 2021, 8:05 PM IST
ವಿಧಾನ ಪರಿಷತ್ : ಕುಮ್ಕಿ, ಜಮಾಬಾಣೆ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ಈ ರೀತಿಯ ಭೂ ಗೊಂದಲಗಳಿದ್ದು, ಜಮೀನಿನ ಮಾಲೀಕತ್ವ ಮತ್ತು ಕಾನೂನಾತ್ಮಕ ಪರಿಹಾರಕ್ಕಾಗಿ ಸಮಿತಿ ರಚನೆ ಮಾಡಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕೊಡಗು ಜಿಲ್ಲೆಯ ಜಮ್ಮಾ ಬಾಣೆಯ ಪಹಣಿಯಲ್ಲಿರುವ ಕುಟುಂಬದ ಮುಖ್ಯಸ್ಥ (ಪಟ್ಟೇದಾರರ) ತೆಗೆದು ಹಾಕುವ ಕುರಿತು ಕಾಂಗ್ರೆಸ್ನ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು, ಪಟ್ಟೇದಾರರ ಮಕ್ಕಳಿಗೆ ಜಮೀನು ನೀಡುವ ಸಂಬಂಧ ಕ್ರಮ ಆಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ, ಪಟ್ಟೇದಾರರ ಮಕ್ಕಳಿಗೆ ಜಮೀನು ವರ್ಗಾವಣೆಯಾದರೆ, ಒಂದು ಕುಟುಂಬದಲ್ಲಿ ನೂರರಿಂದ ನೂರತ್ತು ಮನೆತನ ಇರುತ್ತದೆ. ಅವರೆಲ್ಲರಿಗೂ ಅನ್ಯಾಯವಾಗುತ್ತದೆ.
ಈ ಕ್ರಮ ಬದಲಾಗಬೇಕು. ಇದನು ಜಮ್ಮಾ ಬಾಣೆ ಜಮೀನು ನಮ್ಮ ಹೆಗ್ಗಳಿಕೆಯಾಗಿದ್ದು, ಸರ್ಕಾರದಿಂದ ನಮಗೆ ಭೂಮಿ ಬೇಕಾಗಿಲ್ಲ. ಇದರ ವ್ಯವಸ್ಥೆಯನ್ನೇ ಸರಿಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ :ಶಂಕರ್ ಬಿದರಿ ಇ-ಮೇಲ್ ಹ್ಯಾಕ್: ನಾಗಲ್ಯಾಂಡ್ ಮೂಲದ ಮೂವರ ಬಂಧನ
ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಈ ರೀತಿಯ ಸಮಸ್ಯೆಯಿದೆ. ರೈತರಿಗೆ ಅಥವಾ ಉಳಿಮೆ ಮಾಡುವವರಿಗೆ ಭೂಮಿಯ ಹಕ್ಕು ನೀಡುವ ಸಂಬಂಧ ಒಂದು ಸಮಿತಿ ರಚನೆ ಮಾಡಲಾಗುತ್ತದೆ. ಕಾನೂನಾತ್ಮಕವಾಗಿ ಯಾವೆಲ್ಲ ರೀತಿಯ ಪರಿಹಾರ ನೀಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತೇವೆ ಎಂದರು.
ಆಗ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿಯವರು ಎದ್ದು ನಿಂತು, ಕಂದಾಯ ಸಚಿವರು ಕುಮ್ಕಿ, ಜಮ್ಮಾಬಾಣೆ ಸೇರಿದಂತೆ ಎಲ್ಲ ವಿಷಯದ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳಬೇಕು ಎನ್ನುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಕಲಾಪದಾರಿ ತಪ್ಪುವುದು ಬೇಡ ಎಂದು ಪ್ರಶ್ನೆಯನ್ನು ಅಲ್ಲಿಗೆ ಮುಗಿಸಿದರು.