ರಬಕವಿ- ಬನಹಟ್ಟಿ: ಕಟ್ಟಿಂಗ್ ಶಾಪ್ ನಲ್ಲಿ ಸ್ನೇಹಿತನಿಂದಲೇ ಇರಿದು ಯುವಕನ ಕೊಲೆ
Team Udayavani, May 26, 2022, 7:19 PM IST
ರಬಕವಿ- ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಕಟ್ಟಿಂಗ್ ಶಾಪ್ ನಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸಾಗರ ಸೀನಪ್ಪ ಅವಟಿ(23) ಎಂಬ ಯುವಕನನ್ನ ತನ್ನ ಸ್ನೇಹಿತನಾದ ಸದಾಶಿವ ನಾವಿ ಎಂಬವ ಹತ್ಯೆ ಮಾಡಿದ್ದಾನೆ.
ಗೊಂಬಿಗುಡ್ಡ ರಸ್ತೆಯಲ್ಲಿರುವ ಕಟಿಂಗ್ ಅಂಗಡಿಯಲ್ಲಿ ಗೆಳೆಯರು ಕೂಡಿ ಕುಳಿತಾಗ ಒಬ್ಬರಿಗೊಬ್ಬರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಸದಾಶಿವನು ಸಾಗರ ಗೆ ಅಂಗಡಿಯಲ್ಲಿ ಬಳಸುತ್ತಿದ್ದ ಕತ್ತರಿಯಿಂದ ಎದೆಗೆ ಇರಿದಿದ್ದಾನೆ.
ತೀವ್ರ ಗಾಯಗೊಂಡಿದ್ದ ಸಾಗರ ನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಬರಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮೃತನಿಗೆ ತಂದೆ, ತಾಯಿ ಇದ್ದು, ಕಬಡ್ಡಿ ಮತ್ತು ಕ್ರಿಕೆಟ್ ಆಟಗಾರನಾಗಿ ಬಹಳಷ್ಟು ಹೆಸರು ಮಾಡಿದ್ದ.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗೊಂಡಿದ್ದು, ಜಮಖಂಡಿ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ಜೆ.ಕರುಣೇಶಗೌಡ ಮತ್ತು ಪಿಎಸ್ಐ ಸುರೇಶ ಮಂಟೂರ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.