RCB V/s KKR: ನನಗೇ ಅಚ್ಚರಿಯಾಗಿದೆ ಎಂದ ಬ್ಯಾಟಿಂಗ್ ಹೀರೋ ಶಾರ್ದೂಲ್ ಠಾಕೂರ್!
Team Udayavani, Apr 9, 2023, 7:34 AM IST
ಕೋಲ್ಕತಾ: ಟೀಮ್ ಇಂಡಿಯಾ ಪರ ಆಗಾಗ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುವ ಶಾರ್ದೂಲ್ ಠಾಕೂರ್, ಆರ್ಸಿಬಿ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ಹೀರೋ ಆಗಿ ಮೆರೆದದ್ದು ಈಗ ಇತಿಹಾಸ. ಆದರೆ ತನ್ನಿಂದ ಇಂಥದೊಂದು ಬ್ಯಾಟಿಂಗ್ ತೋರ್ಪಡಿಸಲು ಹೇಗೆ ಸಾಧ್ಯವಾಯಿತು, ಇಂಥದೊಂದು ಶಕ್ತಿ ಎಲ್ಲಿಂದ ಬಂತು ಎಂಬುದು ತನಗೇ ಗೊತ್ತಿಲ್ಲ ಎಂಬುದಾಗಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ಇಂಥ ಬ್ಯಾಟಿಂಗ್ ಪ್ರದರ್ಶನ ಹೇಗೆ ಸಾಧ್ಯವಾಯಿತು, ಈ ಶಕ್ತಿ ಎಲ್ಲಿಂದ ಬಂತು ಎಂಬುದು ನನಗೇ ಅಚ್ಚರಿ ಮೂಡಿಸಿದೆ. ನಾನು ಕ್ರೀಸ್ಗೆ ಬರುವಾಗ ತಂಡ ತೀವ್ರ ಸಂಕಟದಲ್ಲಿತ್ತು, ಭಾರೀ ಒತ್ತಡವಿತ್ತು. ಇಂಥ ಸಂದರ್ಭದಲ್ಲಿ ಅತ್ಯುತ್ತಮ ಮಟ್ಟದ ಬ್ಯಾಟಿಂಗ್ ನಡೆಸಲು ಕೌಶಲವೂ ಬೇಕಾಗುತ್ತದೆ. ನೆಟ್ಸ್ನಲ್ಲಿ ಕಠಿನ ಅಭ್ಯಾಸ ನಡೆಸಿದ್ದು ಸಹಕಾರಿ ಆಗಿರಬೇಕು…” ಎಂಬುದಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದ ಠಾಕೂರ್ ಹೇಳಿದರು.
ಶಾರ್ದೂಲ್ ಠಾಕೂರ್ ಅಂಗಳಕ್ಕಿಳಿಯುವಾಗ ಕೆಕೆಆರ್ 12ನೇ ಓವರ್ನಲ್ಲಿ 89ಕ್ಕೆ 5 ವಿಕೆಟ್ ಕಳೆದುಕೊಂಡು ಪರದಾಡುತ್ತಿತ್ತು. ಇಂಥ ಹೊತ್ತಿನಲ್ಲಿ ಮಿಂಚಿನ ಆಟವಾಡಿದ ಠಾಕೂರ್ ಕೇವಲ 29 ಎಸೆತಗಳಿಂದ 68 ರನ್ ಸಿಡಿಸಿ (9 ಬೌಂಡರಿ, 3 ಸಿಕ್ಸರ್) ಕೆಕೆಆರ್ ಮೊತ್ತವನ್ನು ಇನ್ನೂರರ ಗಡಿ ದಾಟಿಸಲು ಯಶಸ್ವಿಯಾದರು. ರಿಂಕು ಸಿಂಗ್ ಜತೆಗೂಡಿ 6ನೇ ವಿಕೆಟಿಗೆ 103 ರನ್ ಪೇರಿಸಿದರು. ಬೌಲಿಂಗ್ ದಾಳಿಯ ವೇಳೆ ಮೈಕಲ್ ಬ್ರೇಸ್ವೆಲ್ ಅವರ ಬಹುಮೂಲ್ಯ ವಿಕೆಟ್ ಕೆಡವಿದರು.