RCB V/s LSG: ಬೆಂಗಳೂರು ತಂಡಕ್ಕೆ ಲಕ್ನೋ ಟೆಸ್ಟ್
ಎದುರಾಳಿ ನಾಯಕ ರಾಹುಲ್ಗೂ ಹೋಮ್ ಗ್ರೌಂಡ್
Team Udayavani, Apr 10, 2023, 7:29 AM IST
ಬೆಂಗಳೂರು: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಅಷ್ಟೇನೂ ಸಮತೋಲನ ಹೊಂದಿಲ್ಲದ ಆರ್ಸಿಬಿ ಸೋಮವಾರ ರಾತ್ರಿ ತವರಿನ ಅಂಗಳದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಹ ತ್ವದ ಪಂದ್ಯವಾಡಲಿದೆ. ಲಕ್ನೋ ನಾಯಕ ಕೆ.ಎಲ್. ರಾಹುಲ್ ಅವರಿಗೆ ಇದು “ತವರು ಪಂದ್ಯ” ಎಂಬುದೊಂದು ವಿಶೇಷ.
ಲಕ್ನೋ 3 ಪಂದ್ಯಗಳಲ್ಲಿ ಎರಡನ್ನು ಗೆದ್ದರೆ, ಬೆಂಗಳೂರು ಎರಡರಲ್ಲಿ ಒಂದನ್ನು ಗೆದ್ದು ಇನ್ನೊಂದನ್ನು ಕಳೆದು ಕೊಂಡಿದೆ. ಮೊದಲ ಪಂದ್ಯದ ಗೆಲುವು ಚಿನ್ನಸ್ವಾಮಿ ಅಂಗಳದಲ್ಲೇ ಮುಂಬೈ ವಿರುದ್ಧ ಒಲಿದಿತ್ತು. ಆದರೆ ಕೋಲ್ಕತಾಕ್ಕೆ ಹೋಗಿ ಕೆಕೆಆರ್ಗೆ ಸಂಪೂರ್ಣ ಶರಣಾಗಿ ಬಂತು.
ಮುಂಬೈಯನ್ನು ಫಾ ಡುಪ್ಲೆಸಿಸ್-ವಿರಾಟ್ ಕೊಹ್ಲಿ ಇಬ್ಬರೇ ಸೇರಿ ಕೊಂಡು ಕೆಡವಿದಾಗ ಆರ್ಸಿಬಿ ಅಭಿ ಮಾನಿಗಳು ಸಂಭ್ರಮಿಸಿದ್ದು ಅಷ್ಟಿಷ್ಟಲ್ಲ. ಆದರೆ ತಂಡದ ಬ್ಯಾಟಿಂಗ್ ಆಳ ಏನೂ ಇಲ್ಲ ಎಂಬುದು ಕೆಕೆಆರ್ ವಿರುದ್ಧ ಸ್ಪಷ್ಟವಾಗಿ ಅರಿವಿಗೆ ಬಂತು. ಡುಪ್ಲೆಸಿಸ್, ಕೊಹ್ಲಿ ಹೊರತುಪಡಿಸಿದರೆ ನಿಂತು ಆಡುವವರು ಇಲ್ಲ. ಇವರಿಬ್ಬರು ಬೇಗ ಪೆವಿಲಿಯನ್ ಸೇರಿಕೊಂಡರೆ ಏನಾಗಬೇಕಿತ್ತೋ ಅದೇ ಆಯಿತು. ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳ ಅಭಾವ ಎದ್ದು ಕಾಣುತ್ತದೆ.
ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್ ಹಿಟ್ಟರ್ಗಳಾದರೂ ಯಾವುದೇ ಕ್ಷಣದಲ್ಲಿ ಔಟಾಗುವ ಬ್ಯಾಟರ್. ದಿನೇಶ್ ಕಾರ್ತಿಕ್ ಫಾರ್ಮ್ ಮೇಲೆ ಅವರಿಗೇ ನಂಬಿಕೆ ಇದ್ದಂತಿಲ್ಲ. ಅನುಜ್ ರಾವತ್ ಮೊನ್ನೆ ಆಡಿದ್ದೇ ತಿಳಿಯಲಿಲ್ಲ. ಪರಿಣಾಮ, ಮುಂಬೈ ವಿರುದ್ಧ ನೋಲಾಸ್ 148ರ ತನಕ ಸಾಗಿದ್ದ ಆರ್ಸಿಬಿ, ಕೆಕೆಆರ್ ವಿರುದ್ಧ 123ಕ್ಕೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ನಿಂತು ಆಡಲು ತಿಳಿಯದ ಹರ್ಷಲ್ ಪಟೇಲ್, ಶಾಬಾಜ್ ಅಹ್ಮದ್ ಅವರಿಗೆ ಭಡ್ತಿ ನೀಡುವಷ್ಟರ ಮಟ್ಟಿಗೆ ಆರ್ಸಿಬಿ ಬ್ಯಾಟಿಂಗ್ ಲೈನ್ಅಪ್ ಹದಗೆಟ್ಟಿದ್ದೊಂದು ದುರಂತ.
ಇವರನ್ನೆಲ್ಲ ಹೊರತುಪಡಿಸಿದರೆ ಉಳಿದವರು ಬೌಲರ್ಗಳ ಪಟ್ಟಿ ಸೇರುತ್ತಾರೆ. ಸದ್ಯ ಇವರು ರನ್ನನ್ನೂ ನಿಯಂತ್ರಿಸದ, ರನ್ ಬಾರಿಸಲೂ ಆಗದ ಸ್ಥಿತಿಯಲ್ಲಿದ್ದಾರೆ. ಹರ್ಷಲ್ ಪಟೇಲ್, ಶಾಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಕಣ್ì ಶರ್ಮ ಕೆಕೆಆರ್ ವಿರುದ್ಧ ಯಾವುದೇ ಪರಿಣಾಮ ಬೀರಿರಲಿಲ್ಲ. 12ನೇ ಓವರ್ ವೇಳೆ 89ಕ್ಕೆ 5 ವಿಕೆಟ್ ಉರುಳಿಸಿಕೊಂಡು ಚಡಪಡಿಸುತ್ತಿದ್ದ ಕೆಕೆಆರ್, ಅನಂತರ 7ಕ್ಕೆ 204ರ ತನಕ ಬೆಳೆದಿತ್ತು.
ಆರ್ಸಿಬಿಗೆ ತುರ್ತು ಅಗತ್ಯವಿರು ವುದು ಸ್ಪೆಷಲಿಸ್ಟ್ ವನ್ಡೌನ್ ಹಾಗೂ ಮಿಡ್ಲ್ ಆರ್ಡರ್ ಬ್ಯಾಟ್ಸ್ ಮನ್. ಇಲ್ಲಿ ಗೋಚರಿಸುವ ಹೆಸರು ಮಹಿಪಾಲ್ ಲೊನ್ರೋರ್, ಸುಯಶ್ ಪ್ರಭುದೇಸಾಯಿ ಮಾತ್ರ. ಹಾಗೆಯೇ ಘಾತಕ ಬೌಲರ್. ವೇಯ್ನ ಪಾರ್ನೆಲ್ ಬಂದರೆ ಪರಿಸ್ಥಿತಿ ಸುಧಾರಿಸಬಹುದು.
ಮೇಲ್ನೋಟಕ್ಕೆ ಲಕ್ನೋ ಬಲಿಷ್ಠ
ಲಕ್ನೋ ಸೂಪರ್ಜೈಂಟ್ಸ್ ಬಿಗ್ ಹಿಟ್ಟರ್ ಹಾಗೂ ಉತ್ತಮ ದರ್ಜೆಯ ಆಲ್ರೌಂಡರ್ಗಳನ್ನು ಹೊಂದಿರುವ ತಂಡ. ಜತೆಗೆ ಅತ್ಯುತ್ತಮ ದರ್ಜೆಯ ಸ್ಪಿನ್ನರ್ಗಳನ್ನೂ ಹೊಂದಿದೆ. ಹೈದರಾ ಬಾದ್ ವಿರುದ್ಧ ಕೃಣಾಲ್ ಪಾಂಡ್ಯ ಆಲ್ರೌಂಡ್ ಶೋ ನೀಡಿದ್ದನ್ನು ಮರೆ ಯುವಂತಿಲ್ಲ. ಜತೆಗೆ ರವಿ ಬಿಷ್ಣೋಯಿ, ಅಮಿತ್ ಮಿಶ್ರಾ ಕೂಡ ಉತ್ತಮ ಲಯದಲ್ಲಿದ್ದಾರೆ. ಬಿಷ್ಣೋಯಿ ಈಗಾ ಗಲೇ 6 ವಿಕೆಟ್ ಉರುಳಿಸಿದ್ದಾರೆ.
ಕೈಲ್ ಮೇಯರ್, ರಾಹುಲ್, ಹೂಡಾ, ಸ್ಟೋಯಿನಿಸ್, ಶೆಫರ್ಡ್, ಪೂರಣ್ ಅವರನ್ನೊಳಗೊಂಡ ಲಕ್ನೋ ಬ್ಯಾಟಿಂಗ್ ಸರದಿ ಕೂಡ ವೈವಿಧ್ಯ ಮಯ. ಮೇಲ್ನೋಟಕ್ಕೆ ಲಕ್ನೋ ಪಡೆ ಆರ್ಸಿಬಿಗಿಂತ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ.
ಡೆಲ್ಲಿ ವಿರುದ್ಧ 50 ರನ್ ಜಯ, ಚೆನ್ನೈ ವಿರುದ್ಧ 12 ರನ್ ಸೋಲಿನ ಬಳಿಕ ಹೈದರಾಬಾದ್ಗೆ 5 ವಿಕೆಟ್ ಸೋಲುಣಿಸಿದ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ಹಳಿ ಏರಿದೆ.