ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿ : ವೇತನ ಹಾಗೂ ಕರ್ತವ್ಯದ ಅವಧಿಯ ಪರಿಷ್ಕರಣೆ
Team Udayavani, Jan 14, 2022, 6:58 PM IST
ಬೆಂಗಳೂರು : ಕಳೆದ ಕೆಲ ದಿನಗಳಿಂದ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದ ಅತಿಥಿ ಉಪನ್ಯಾಸಕರ ಬೇಡಿಕೆಗೆ ಕೊನೆಗೂ ರಾಜ್ಯ ಸರಕಾರ ಸ್ಪಂದಿಸಿದ್ದು, ಲಭ್ಯತೆ ಆಧರಿಸಿ 15 ಗಂಟೆಗಳ ಗರಿಷ್ಠ ಕಾರ್ಯಭಾರ ಸೌಲಭ್ಯ ನೀಡಲು ಸರಕಾರ ಸಮ್ಮತಿಸಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಜತೆ ಚರ್ಚೆ ನಡೆಸಿದ ನಂತರ ಅತಿಥಿ ಉಪನ್ಯಾಸಕರ ವೇತನ ಹಾಗೂ ಕರ್ತವ್ಯದ ಅವಧಿಯ ಪರಿಷ್ಕರಣೆ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಪ್ರಕಟಿಸಿದ್ದಾರೆ. ಆದರೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಪ್ರಸ್ಥಾಪಕ್ಕೆ ಮಾತ್ರ ಸರಕಾರ ಒಪ್ಪಿಲ್ಲ.
ಸರಕಾರದ ನಿರ್ಧಾರದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಅತಿಥಿ ಉಪನ್ಯಾಸಕರ ಬಹುದಿನದ ಬೇಡಿಕೆ ಈಡೇರಿಸಲು ಒಪ್ಪಿದ್ದೇವೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿ ಮಾಡಿದ್ದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಸಚಿವರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಸರಕಾರ ವಿಸ್ತೃತ ಆದೇಶವನ್ನು ಪ್ರಕಟಿಸಿದ್ದು ಅದರ ಮುಖ್ಯಾಂಶಗಳು ಹೀಗಿವೆ…..
-ಈಗ ನೀಡುತ್ತಿದ್ದ 8 ರಿಂದ 10 ಗಂಟೆಗಳ ಕಾರ್ಯಭಾರ 15 ಗಂಟೆಗೆ ವಿಸ್ತರಣೆ.
– 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವುದರ ಜತೆಗೆ ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿದವರಿಗೆ32000 ರೂ. ವೇತನ
– 5 ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿರುವ ಯುಜಿಸಿ ನಿಗದಿತ ಅರ್ಹತೆ ಹೊಂದಿರುವವರಿಗೆ30000 ರೂ. ವೇತನ.
– 5 ವರ್ಷ ಸೇವೆ ಸಲ್ಲಿಸಿದ ಆದರೆ ಯುಜಿಸಿ ಮಾನದಂಡ ಅರ್ಹತೆ ಇಲ್ಲದವರಿಗೆ 28000 ರೂ.
– 5 ವರ್ಷಕ್ಕಿಂತ ಕಡಿಮೆ ಸೇವೆ ಹಾಗೂ ಯುಜಿಸಿ ನಿಗದಿತ ಅರ್ಹತೆ ಇಲ್ಲದವರಿಗೆ26 ಸಾವಿರ ರೂ. ವೇತನ ನಿಗದಿ.
– ಅತಿಥಿ ಉಪನ್ಯಾಸಕರು ಸೆಮಿಸ್ಟರ್ ಬದಲಾಗಿ ಶೈಕ್ಷಣಿಕ ವರ್ಷಕ್ಕೆ ಅಂದರೆ 10 ತಿಂಗಳಿಗೆ ನೇಮಕ ಮಾಡಿಕೊಳ್ಳುವುದು.
– ಗೌರವ ಧನವನ್ನು ಪ್ರತಿ ತಿಂಗಳು 10 ನೇ ತಾರೀಕಿನೊಳಗಾಗಿ ಬ್ಯಾಂಕ್ ಖಾತೆಗೆ ಹಾಕುವುದು.
– 15 ಗಂಟೆಗಳ ಕಾರ್ಯಭಾರ ಅವಧಿ ಅಲಭ್ಯವಾದರೆ ಗರಿಷ್ಠ ಲಭ್ಯತೆಯ ಅವಕಾಶ ನೀಡುವುದು.’
– ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಪಡೆಯಲು ಮೂರು ವರ್ಷಗಳ ಅವಕಾಶವನ್ನು ನೀಡಲಾಗಿದೆ.