ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹೇಳಿದ್ದನ್ನು ಭಟ್ರು ಕೇಳಬೇಕು ಅದೇ ಧರ್ಮ : ಬೇಳೂರು
Team Udayavani, Nov 2, 2020, 5:39 PM IST
ಶಿವಮೊಗ್ಗ : ಸಿಗಂದೂರು ದೇವಸ್ಥಾನದಲ್ಲಿ ಧರ್ಮದರ್ಶಿ ರಾಮಪ್ಪ ಅವರು ಹೇಳಿದ್ದನ್ನು ಭಟ್ರು ಒಪ್ಪಿಕೊಂಡು ಹೋಗಬೇಕು ಇಲ್ಲಿ ಇದೆ ಧರ್ಮ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಲಹಾ ಸಮಿತಿ ನೇಮಕ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಈಡಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಿಂಗದೂರು ವಿಷಯದಲ್ಲಿ ದುರುದ್ದೇಶ ಇಟ್ಟುಕೊಂಡು ಏನಾದರೂ ಮಾಡಲು ಹೋದರೆ ನಾವು ಖಂಡಿತಾ ಸುಮ್ಮನಿರಲ್ಲ ಎಂದ ಅವರು ಸಮಾಜವನ್ನ ಕೀಳುಮಟ್ಟದಲ್ಲಿ ನೋಡುವ ಶಾಸಕರು ಹಾಗೂ ಜಿಲ್ಲಾಧಿಕಾರಿ ಮುಂದೆ ನಾವು ಸುಮ್ಮನೇ ಕೂರಲ್ಲ ಎಂದರು.
ರಾಜ್ಯದಲ್ಲಿ 55 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈಡಿಗ ಸಮುದಾಯದ ಜನರಿದ್ದಾರೆ. ಅಲ್ಲದೆ 10 ವರ್ಷ ನಾನು ಆಡಳಿತ ಮಾಡಿದ್ದೇನೆ, ಕಾಗೋಡು ಸಾಹೇಬ್ರು ಮಾಡಿದಾಗ ಜಾತಿ ವಿಚಾರ ಬರಲಿಲ್ಲ. ಅದ್ರೇ, ಈಗ ಯಡಿಯೂರಪ್ಪ, ಅವರ ಮಗ ಹಾಗೂ ಶಾಸಕರು ಸೇರಿ ಜಾತಿ ತರ್ತಾ ಇದ್ದಾರೆ. ರಾಘವೇಂದ್ರ ಅವರು ತೀರ್ಮಾನ ಮಾಡಿಕೊಂಡು ಮಾಡಿರುವ ಪಿತೂರಿ ಇದು. ಇದರ ಉದ್ದೇಶ ನನಗೆ ಗೊತ್ತು ಎಂದು ಕಿಡಿಕಾರಿದರು.
ಇದನ್ನೂ ಓದಿ:ರಾಜ್ಯದ ಗಮನಸೆಳೆದಿದ್ದ ಗಂಗಾವತಿ ನಗರಸಭೆ ಕಾಂಗ್ರೆಸ್ ತೆಕ್ಕೆಗೆ!
ರಾಮಪ್ಪ ಹೇಳಿದ್ದನ್ನ ಭಟ್ರು ಒಪ್ಕೊಂಡು ಹೋಗಬೇಕು. ಅದೇ ಧರ್ಮ ಎಂದ ಬೇಳೂರು ಗೋಕರ್ಣದಲ್ಲಿ ಎಷ್ಟು ಹೊಡೆದಾಟ ಬಡಿದಾಟ ಆಯ್ತು..ಆಗ ಏನಾದರೂ ಮಾಡಿದ್ರಾ….? ಕೊಲ್ಲೂರಲ್ಲೂ ಆಗಿದೆ, ಕನಕ ದಾಸರ ವಿಚಾರ ಉಡುಪಿಯಲ್ಲಿಯೂ ಆಗಿದೆ. ಹಾಗಾದ್ರೇ ಅಲ್ಲಿ ಯಾವ ಸಮಿತಿಗಳು ರಚನೆಯಾಗಿವೆ ಹೇಳಿ ನೋಡೋಣ. ನಾವು ಜಾತಿ ತರಲ್ಲ ಎಂದ ಅವರು ಹಿಂದುಳಿದ ವರ್ಗದ ದೇವಾಲಯ ನೆಲಸಮ ಮಾಡಲು ಹೊರಟಿದ್ದು ಸರಿಯಲ್ಲ ಎಂದಿದ್ದಾರೆ.
ರಾಮಪ್ಪ ಶ್ರಮ ಹಾಕಿದ ದೇವಾಲಯಕ್ಕೆ ಒಮ್ಮೆಲೆ ಸಮಿತಿ ರಚನೆ ಮಾಡ್ತೀವಿ ಅಂದರೆ ಹೇಗೆ ಸರಿಯಾಗುತ್ತೆ…? ಈಡಿಗ ಸಮುದಾಯದ ಸ್ವಯಂ ಘೋಷಿತ ಸಂಘವೆಂದು ಡಿಸಿ ನಾಲಗೆ ಹರಿಬಿಟ್ಟಿದ್ದಾರೆ. ಈ ವಿಚಾರದಲ್ಲಿ ಕ್ಷಮೆ ಕೇಳದೇ ಇದ್ದರೆ ಡಿಸಿ ಕಚೇರಿ ಮುತ್ತಿಗೆ ಹಾಕ್ತೀವಿ, ಸಿಗಂದೂರು ಉಳಿಸಿ ಎಂದು ಬೃಹತ್ ಹೋರಾಟ ಮಾಡ್ತಿವಿ, ಎಲ್ಲಾ ಜಾತಿಯವರು ಸೇರಿ 25 ಸಾವಿರ ಜನರನ್ನ ಸೇರಿಸೋ ತಾಕತ್ ನನಗೆ ಇದೆ ಎಂದು ಗುಡುಗಿದ್ದಾರೆ.