ಅಂಜನಾದ್ರಿಗೆ ಹರಿದು ಬಂದ ಪ್ರವಾಸಿಗರ ದಂಡು : ಬೆಟ್ಟ ಹತ್ತಲು ಕ್ಯೂ
Team Udayavani, Oct 17, 2021, 3:46 PM IST
ಗಂಗಾವತಿ: ನವರಾತ್ರಿ,ದಸರಾ ಹಬ್ಬದ ಸಾಲುಸಾಲು ರಜೆಗಳು ಬಂದ ಕಾರಣ ತಾಲ್ಲೂಕಿನ ಅಂಜನಾದ್ರಿ ಕಿಷ್ಕಿಂಧಾ ಪ್ರದೇಶಕ್ಕೆ ಶನಿವಾರ ಮತ್ತು ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ.
ಅಂಜನಾದ್ರಿ ಶ್ರೀ ಆಂಜನೇಯನ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು 575 ಮೆಟ್ಟಿಲುಗಳನ್ನು ಹತ್ತಲು ಕಿಲೋಮೀಟರ್ ಗಟ್ಟಲೆ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂತು.
ಇತ್ತೀಚಿನ ದಶಕಗಳಲ್ಲಿ ಕಿಷ್ಕಿಂದಾ ಅಂಜನಾದ್ರಿ ಪ್ರದೇಶ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ.ಆನೆಗೊಂದಿ ಭಾಗದಲ್ಲಿ ಅಂಜನಾದ್ರಿ ಪಂಪಾ ಸರೋವರ, ಚಿಂತಾಮಣಿ ಋಷಿಮುಖ ಪರ್ವತ, ರಾಣಾಪುರ್ ಲೇಕ್, ಸಾಣಾಪುರ ವಾಟರ್ ಫಾಲ್ಸ್ ಸೇರಿದಂತೆ ಸೂರ್ಯೋದಯ ಮತ್ತು ಸೂರ್ಯಾಸ್ತ ವಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಐಟಿ ಬಿಟಿ ಉದ್ಯೋಗಿಗಳು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಶನಿವಾರ ಮತ್ತು ರವಿವಾರ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿದ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಜನಾದ್ರಿ ಕೆಳಗಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಗಳು ಭರ್ತಿಯಾಗಿ ರಸ್ತೆಯುದ್ದಕ್ಕೂ ನಿಂತ ಕಾರಣ ಸುಗಮ ಸಂಚಾರಕ್ಕೆ ತೊಂದರೆ ಉಂಟಾಯಿತು.
ಬೆಂಗಳೂರು ,ಹೈದರಾಬಾದ್, ನಾಗ್ಪುರ್ ಮತ್ತು ಮಂಗಳೂರು ಸೇರಿದಂತೆ ಹೊರರಾಜ್ಯಗಳಿಂದಲೂ ಆಗಮಿಸಿರುವ ಐಟಿ- ಬಿಟಿ ಉದ್ಯೋಗಿಗಳು ಅಂಜನಾದ್ರಿಕಿಷ್ಕಿಂದಾ ಭಾಗದ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ.
ಆನೆಗೊಂದಿ ಭಾಗದಲ್ಲಿರುವ ಹೋಟೆಲ್ ಗಳು ಎಲ್ಲಾ ರೂಂಗಳು ಭರ್ತಿಯಾಗಿದ್ದು ಹೋಟೆಲ್ ಮಾಲೀಕರಿಗೆ ಹಾಗೂ ಅಂಜನಾದ್ರಿ ಬಳಿ ಹೂವು ಹಣ್ಣು ತೆಂಗಿನಕಾಯಿ, ಕೇಸರಿ ಶಾಲುಗಳ ಭರ್ಜರಿ ಮಾರಾಟವಾಗುತ್ತಿದೆ.