ಪವನ, ಜಲ, ಸೌರಶಕ್ತಿಗೆ ಆದ್ಯತೆ : ಆರ್ಟಿಪಿಎಸ್ಗೆ ಶೀಘ್ರ ಕೊನೇ ಮೊಳೆ?
Team Udayavani, Mar 24, 2021, 6:40 AM IST
ರಾಯಚೂರು: ರಾಜ್ಯಕ್ಕೆ ಶೇ. 40ರಷ್ಟು ವಿದ್ಯುತ್ ಪೂರೈಸುವ ರಾಯಚೂರು ಶಾಖೋತ್ಪನ್ನ ಕೇಂದ್ರ (ಆರ್ಟಿಪಿಎಸ್) ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ!
ಸದನದಲ್ಲಿ ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಕೇಳಿದ್ದ ಪ್ರಶ್ನೆಗೆ ಸಿಎಂ ನೀಡಿರುವ ಉತ್ತರ ಇಂಥ ಅನುಮಾನಗಳಿಗೆ ಪುಷ್ಟಿ ನೀಡಿದೆ. ಸರಿಸುಮಾರು 3 ದಶಕದಿಂದ ರಾಜ್ಯಕ್ಕೆ ಬೆಳಕು ನೀಡುತ್ತಿದೆ. ಈ ಕೇಂದ್ರ ಲಾಕ್ಡೌನ್ ಕಾರಣಕ್ಕೆ ಬಹುತೇಕ ಅವ ಧಿ ಸ್ಥಗಿತಗೊಂಡಿತ್ತು. ಇದೇ ನೆಪದಡಿ 600ಕ್ಕೂ ಅ ಧಿಕ ಕಾರ್ಮಿಕರನ್ನು ತೆಗೆಯಲಾಗಿದೆ. ಒಂದೆರಡು ವರ್ಷಗಳಿಂದ ಈ ಕೇಂದ್ರದ ಒಂದೊಂದೇ ಘಟಕಗಳ ನಿಲ್ಲಿಸಲಾಗುತ್ತಿದೆ. ದುರಸ್ತಿಯನ್ನೂ ವಿಳಂಬಿಸಲಾಗುತ್ತಿದೆ ಎನ್ನುವ ಆರೋಪಗಳಿವೆ.
ಎಂಒಡಿ ಆಧಾರದಡಿ ನಿರ್ಧಾರ
ವಿದ್ಯುತ್ ಉತ್ಪಾದನೆ ಘಟಕಗಳ ಚಾಲನೆ ಇಲ್ಲವೇ ಸ್ಥಗಿತ ಕುರಿತು “ಮೆರಿಟ್ ಆರ್ಡರ್ ಡಿಸ್ಪ್ಯಾಚ್’ ಆಧಾರದಡಿ ನಿರ್ಧರಿಸುವುದಾಗಿ ಸಿಎಂ ಸದನದಲ್ಲಿ ಉತ್ತರಿಸಿದ್ದಾರೆ. ಎಂಒಡಿ ಪಟ್ಟಿ ತಯಾರಿಕೆಗೆ ಮಹಾರಾಷ್ಟ್ರ ಮತ್ತು ಉ. ಪ್ರದೇಶಗಳ ಮಾದರಿಯಲ್ಲಿ ನಿಯಮಾವಳಿ ನೀಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಕೆಪಿಸಿಎಲ್ನಿಂದ ಪ್ರಸ್ತಾವನೆ ನೀಡಲಾಗಿದೆ ಎಂದಿದ್ದಾರೆ. ನಿಯಮಾವಳಿಗಳ ತಿದ್ದುಪಡಿ ಆರ್ಟಿಪಿಎಸ್ ಭವಿಷ್ಯ ನಿರ್ಧರಿಸಲಿದೆ ಎನ್ನಲಾಗುತ್ತಿದೆ.
ಕೆಪಿಟಿಸಿಎಲ್ಗೆ ಆರ್ಥಿಕ ಹೊರೆ?
ಸರಕಾರ ಪರ್ಯಾಯ ಮೂಲಗಳನ್ನು ಹೆಚ್ಚಿಸುತ್ತಿದೆ. ಶಾಖೋತ್ಪನ್ನ ಕೇಂದ್ರಗಳಲ್ಲಿ ಒಂದು ಯುನಿಟ್ ವಿದ್ಯುತ್ ಉತ್ಪಾದನೆಗೆ 3ರಿಂದ 3.5 ರೂ. ಖರ್ಚಾದರೆ ಪವನ, ಜಲ, ಸೌರಶಕ್ತಿಯಿಂದ ಇಷ್ಟೇ ವಿದ್ಯುತ್ ಉತ್ಪಾದನೆಗೆ 1ರಿಂದ 1.25 ರೂ. ಸಾಕು.