ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು
Team Udayavani, Sep 27, 2021, 7:45 PM IST
ಕೊರಟಗೆರೆ: ಮದುವೆಗಾಗಿ ಕೈಸಾಲ ಮಾಡಿದ್ದ ಯುವಕನೋರ್ವ ತೀರಿಸಲಾಗದೆ ಮದುವೆಯಾದ ಐದೇ ತಿಂಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ತೋವಿನಕೆರೆ ಗ್ರಾಮದಲ್ಲಿ ದುರ್ಘಟನೆ ಜರುಗಿದ್ದು ಚಿಕ್ಕಪ್ಪಯ್ಯನ ಮಗ ಹನುಮಂತರಾಜು (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಮೃತ ಹನುಮಂತರಾಜು ಕಳೆದ ಐದು ತಿಂಗಳುಗಳ ಹಿಂದೆ ಕೈಸಾಲ ಮಾಡಿ ಮದುವೆಯಾಗಿದ್ದ,ಸದರಿ ಸಾಲವನ್ನು ತೀರಿಸಲು ಸಾಧ್ಯವಾಗಿರುವುದಿಲ್ಲ. ಮದುವೆಯಾಗಿ ಕೇವಲ ಐದು ತಿಂಗಳಲ್ಲಿಯೇ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮೃತ ಯುವಕ ಕಳೆದ ಐದು ತಿಂಗಳುಗಳ ಹಿಂದೆ ಶಿರಾ ತಾಲ್ಲೂಕಿನ ಮೇಕರಹಳ್ಳಿ ಭೂಮಿಕಾ ಎಂಬುವವರನ್ನು ವಿವಾಹವಾಗಿದ್ದು ಮದುವೆಗಾಗಿ ಕೈಸಾಲ ಮಾಡಿಕೊಂಡಿದ್ದರು. ಪೋಷಕರಿಗೆ ಹಲವು ಬಾರಿ ಕೈಸಾಲದ ಬಗ್ಗೆ ತಿಳಿಸಿದಾಗ , ಈ ಬಾರಿ ಅಡಿಕೆ ತೋಟದ ಬೆಳೆ ಮಾರಿ ಹಣ ಹೊಂದಿಸಿ ಕೊಡವುದಾಗಿ ಭರವಸೆ ನೀಡಿದ್ದರು. ಅದರೂ ಮೃತ ಯುವಕ ಜೀವನದಲ್ಲಿ ಜಿಗುಪ್ಸೆ ಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.