ಬೆಂಗಳೂರಿನಲ್ಲಿ ಸ್ಫೋಟಕ ಸಿಡಿದು ಯುವಕ ಗಂಭೀರ
Team Udayavani, Sep 20, 2019, 10:55 AM IST
ಬೆಂಗಳೂರು: ಮನೆಯಲ್ಲಿಟ್ಟಿದ್ದ ಸ್ಫೋಟಕ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲಹಂಕದ ಕೂಡಗಲು ಹಟ್ಟಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಯುವಕ ಪವನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಕೂಡಗಲುಹಟ್ಟಿಯ ಮನೆಯೊಂದರ ಮೂರನೇ ಮಹಡಿಯ ಮನೆಯಲ್ಲಿ ಪವನ್ ವಾಸಿಸುತ್ತಿದ್ದು, ಕಳೆದ ರಾತ್ರಿ ಒಬ್ಬನೇ ಮಲಗಿದ್ದರು. ಶುಕ್ರವಾರ ಮುಂಜಾನೆ ಇದ್ದಕ್ಕಿದ್ದಂತೆ ಸ್ಫೋಟಕ ಸಿಡಿದಿದೆ. ಸದ್ದು ಕೇಳಿ ದಿಗಿಲುಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ತೆರಳಿದ ಚಿಕ್ಕಜಾಲ ಪೊಲೀಸರು ಯುವಕ ಪವನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿರಬಹುದು ಎಂಬ ಶಂಕೆಯಿತ್ತು. ಆದರೆ ಸಿಲಿಂಡರ್ ಹಾಗೇಯೇ ಇದ್ದು ಸಿಡಿದಿಲ್ಲ.ಹೀಗಾಗಿ ಯಾವ ಸ್ಪೋಟಕ ಸಿಡಿದಿದೆ. ಯಾವ ಉದ್ದೇಶಕ್ಕೆ ಸಂಗ್ರಹಿಸಿಡಲಾಗಿತ್ತು ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.