ಲೋಕಸಮರ 2019; ಜಿದ್ದಾಜಿದ್ದಿನ ಮಂಡ್ಯ ಕಣದಲ್ಲಿ ನಿಖಿಲ್, ಸುಮಲತಾ ನಡುವೆ ಪೈಪೋಟಿ
Team Udayavani, May 23, 2019, 1:31 PM IST
ಮಂಡ್ಯ: ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ರಾಜ್ಯ, ರಾಷ್ಟ್ರರಾಜಕಾರಣದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ಹಾವು-ಏಣಿಯಾಟ ಮುಂದುವರಿದಿದೆ. ಬೆಳಗ್ಗೆ ಮತಎಣಿಕೆ ಶುರುವಾದಾಗಿನಿಂದ ಒಂದು ಸುತ್ತಿನಲ್ಲಿ ನಿಖಿಲ್ ಮುನ್ನಡೆ ಸಾಧಿಸಿದರೆ, ಮತ್ತೊಂದು ಸುತ್ತಿನಲ್ಲಿ ಸುಮಲತಾ ಮುನ್ನಡೆ ಸಾಧಿಸುವ ಮೂಲಕ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಇದೀಗ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 15 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಸದ್ಯದ ಮತಎಣಿಕೆ ಪ್ರಕಾರ ನಿಖಿಲ್ ಕುಮಾರಸ್ವಾಮಿ 2,36,648 ಮತ ಪಡೆದಿದ್ದು, ಸುಮಲತಾ ಅಂಬರೀಶ್ 2,51,988 ಮತ ಗಳಿಸಿದ್ದಾರೆ. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಂಡ್ಯದ ಮತದಾರರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಸಂಜೆಯೊಳಗೆ ಬಹಿರಂಗವಾಗಲಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ನ ನಟರಾದ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಸಿಎಂ ಕುಮಾರಸ್ವಾಮಿ, ಮೈತ್ರಿಕೂಟದ ಸಿದ್ದರಾಮಯ್ಯ, ಡಿಕೆಶಿ ಶಿವಕುಮಾರ್ ಸೇರಿದಂತೆ ಘಟಾನುಘಟಿಗಳು ಪ್ರಚಾರ ಕಾರ್ಯ ನಡೆಸುವ ಮೂಲಕ ಭರ್ಜರಿ ಬಲಪ್ರದರ್ಶನ ನಡೆಸಿದ್ದರು. ತೀಕ್ಷ್ಣ ಹೇಳಿಕೆ, ವಾಕ್ಸಮರಗಳ ಮೂಲಕ ಮಂಡ್ಯ ಲೋಕಸಭೆ ಚುನಾವಣೆ ಸ್ಟಾರ್ ಅಖಾಡವಾಗಿ ಗಮನಸೆಳೆದಿತ್ತು.