ಸ್ಥಳ ನೀಡಿದರೆ ಕಾಸರಗೋಡಿನಲ್ಲೇ ಏಮ್ಸ್ : ನಡ್ಡಾ
Team Udayavani, Jul 28, 2018, 6:10 AM IST
ಕಾಸರಗೋಡು: ಕೇರಳ ರಾಜ್ಯ ಸರಕಾರ ಅಗತ್ಯದ ಸ್ಥಳ ನೀಡಿದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಏಮ್ಸ್) ಕಾಸರಗೋಡಿನಲ್ಲೇ ಸ್ಥಾಪಿಸ ಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಹೇಳಿದ್ದಾರೆ.
ಕಾಸರಗೋಡು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು, ಕೇಂದ್ರ ಮೆಡಿಕಲ್ ಕಾಲೇಜು ಕಾಸರಗೋಡಿನಲ್ಲೇ ಸ್ಥಾಪಿಸಬೇಕೆಂದು ಸಂಸದ ಪಿ. ಕರುಣಾಕರನ್ ಅವರ ನೇತೃತ್ವದ ಸರ್ವಪಕ್ಷ ನಿಯೋಗ ಭೇಟಿ ನೀಡಿ ಸಲ್ಲಿಸಿದ ಮನವಿಗೆ ಸಚಿವರು ಏಮ್ಸ್ ಸ್ಥಾಪಿಸುವ ಕುರಿತಾಗಿ ಭರವಸೆ ನೀಡಿದರು.
ಕೇರಳಕ್ಕೆ ಏಮ್ಸ್ ಮಂಜೂರು ಮಾಡಿದೆ. ಏಮ್ಸ್ ಬಗ್ಗೆ ಕೇರಳಕ್ಕೆ ನೀಡಿರುವ ಭರವಸೆ ಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಏಮ್ಸ್ ಸ್ಥಾಪಿಸಲು ಅಗತ್ಯದ ಸ್ಥಳ ವನ್ನು ನೀಡಬೇಕಾದುದು ಕೇರಳ ಸರಕಾರ ವಾಗಿದೆ. ಕೇರಳ ಸರಕಾರ ಸ್ಥಳ ನೀಡಿದಲ್ಲಿ ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸಲು ಕೇಂದ್ರ ಸರಕಾರದಿಂದ ಯಾವುದೇ ಅಡ್ಡಿಯಿಲ್ಲ ಎಂದರು.
ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸ ಬೇಕೆಂದು ಕೇರಳ ಸರಕಾರ ಬೇಡಿಕೆ ನೀಡಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದು.
ಎಂಡೋಸಲ್ಫಾನ್ ದುರಂತ ಭೂಮಿ, ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಗಡಿ ಪ್ರದೇಶ ಎಂಬುದನ್ನು ಪರಿಗಣಿಸಿ ಕಾಸರ ಗೋಡು ಜಿಲ್ಲೆಯಲ್ಲೇ ಕೇಂದ್ರ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನು ವಿನಂತಿಸಿದೆ.
ಇದೇ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾಬ್ಡೇಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಈ ಬೇಡಿಕೆಗಳನ್ನು ಪರಿಗಣಿಸುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.ನಿಯೋಗದಲ್ಲಿ ಸಂಸದರಾದ ಪಿ. ಕರುಣಾಕರನ್, ಪಿ.ಕೆ. ಶ್ರೀಮತಿ, ಶಾಸಕ ಎಂ. ರಾಜಗೋಪಾಲನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಮೊದಲಾದವರಿದ್ದರು.
“ತಾಂತ್ರಿಕ ಅಡ್ಡಿಯೂ ಇದೆ’
ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡು ಮೆಡಿಕಲ್ ಕಾಲೇಜು ಸ್ಥಾಪಿಸು ವುದಕ್ಕೆ ಕೆಲವೊಂದು ತಾಂತ್ರಿಕ ಅಡಚಣೆಗಳಿವೆ. ಲೋಕಸಭಾ ಕ್ಷೇತ್ರವೊಂದರಲ್ಲಿ ಪ್ರಸ್ತುತ ಮೆಡಿಕಲ್ ಕಾಲೇಜೊಂದಿದ್ದರೆ ಅಂತಹ ಕ್ಷೇತ್ರದಲ್ಲಿ ಕೇಂದ್ರ ಮೆಡಿಕಲ್ ಕಾಲೇಜು ಪರಿಗಣಿಸಬೇಕಾಗಿಲ್ಲ ಎಂಬುದು ಕೇಂದ್ರದ ನಿಲುವಾಗಿದೆ. ಕಾಸರಗೋಡು ಲೋಕಸಭಾ ವ್ಯಾಪ್ತಿಯ ಪರಿಯಾರಂನಲ್ಲಿ ಈಗಾಗಲೇ ಮೆಡಿಕಲ್ ಕಾಲೇಜು ಕಾರ್ಯಾಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕೇಂದ್ರ ಮೆಡಿಕಲ್ ಕಾಲೇಜು ಸ್ಥಾಪಿಸಲು ತಾಂತ್ರಿಕ ಅಡ್ಡಿಗಳಿವೆ ಎಂದು ಸಚಿವರು ನಿಯೋಗಕ್ಕೆ ತಿಳಿಸಿದ್ದಾರೆ.
ಸರ್ವ ಪಕ್ಷ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು.