ಬೋವಿಕ್ಕಾನ: ವ್ಯಕ್ತಿ ನಿಗೂಢ ಸಾವು
Team Udayavani, Apr 16, 2024, 12:10 AM IST
ಮುಳ್ಳೇರಿಯ: ಕುಟುಂಬ ಸದಸ್ಯರೊಂದಿಗೆ ವಿಷು ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಮರಳಿದ ವ್ಯಕ್ತಿ ದಾರಿಯಲ್ಲಿ ನಿಗೂಢ ಸಾವಿಗೀಡಾದ ಘಟನೆ ನಡೆದಿದೆ.
ಬೋವಿಕ್ಕಾನ ಎರಿಂಜೇರಿ ಚಕ್ಲಿಯ ಕಾಲನಿಯ ಪದ್ಮನಾಭ (60) ಅವರ ಮೃತದೇಹ ದಾರಿ ಮಧ್ಯೆ ಪತ್ತೆಯಾಗಿದೆ. ಪದ್ಮನಾಭ ಹಾಗೂ ಅವರ ಸಹೋದರರ ಮನೆ ಸಮೀಪದಲ್ಲಿದೆ. ಎ. 14ರಂದು ರಾತ್ರಿ ಸಹೋದರನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ವಿಷು ಹಬ್ಬವನ್ನು ಆಚರಿಸಿದ್ದರು. ರಾತ್ರಿ 10 ಗಂಟೆಗೆ ಮನೆಗೆ ಹೋಗುವುದಾಗಿ ಹೇಳಿ ಅಲ್ಲಿಂದ ಹೊರಟಿದ್ದರು. ಆದರೆ ಮನೆ ತಲುಪಿರಲಿಲ್ಲ.
ತಲೆ, ಹಣೆಯಲ್ಲಿ ಗಾಯ
ಪದ್ಮನಾಭ ಅವರನ್ನು ಹುಡುಕಾಟ ನಡೆಸುತ್ತಿದ್ದಾಗ ಸೋಮವಾರ ಮುಂಜಾನೆ 6.30ಕ್ಕೆ ದಾರಿ ಮಧ್ಯೆ ಅವರ ಮೃತದೇಹ ಪತ್ತೆಯಾಯಿತು. ಮೃತದೇಹದ ತಲೆ ಹಾಗೂ ಹಣೆ ಯಲ್ಲಿ ಗಾಯಗಳಿರುವುದಾಗಿ ಹೇಳ ಲಾಗಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಕಲ್ಲುಗಳಿದ್ದು, ಕಲ್ಲಿನ ಮೇಲೆ ರಕ್ತದ ಕಲೆಗಳು ಕಂಡುಬಂದಿದೆ. ವಿಷಯ ತಿಳಿದು ತಲುಪಿದ ಆದೂರು ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆ ಗೊಳಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆರಳ ಗುರುತು ತಜ್ಞರು ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸಿದ್ದಾರೆ.