ಸಹಪಂಕ್ತಿ ಭೋಜನ ಆಂದೋಲನಕ್ಕೆ 180 ವರ್ಷ
Team Udayavani, Feb 27, 2019, 1:00 AM IST
ಮಂಜೇಶ್ವರ: ಮಂಗಳೂರಿನಲ್ಲಿ ನಡೆದ ಸಹಪಂಕ್ತಿ ಭೋಜನದ 180ನೇ ವರ್ಷಾಚರಣೆ ಅಂಗವಾಗಿ ವಿಚಾರಸಂಕಿರಣ ಮತ್ತು ಸಹಪಂಕ್ತಿ ಭೋಜನ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ ಗಿಳಿವಿಂಡುವಿನಲ್ಲಿ ಮಂಗಳವಾರ ನಡೆಯಿತು.
1839ರಲ್ಲಿ ಮಂಗಳೂರಿನಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ತಾತ ಸಾಹುಕಾರ್ ನಾರಾಯಣ ಪೈ ಅವರು ಸಹಸ್ರ ಭೋಜನ (ಸಹಪಂಕ್ತಿ ಭೋಜನ) ನಡೆಸಿದ್ದರು.
ರಾಜ್ಯ ಸರಕಾರದ 1 ಸಾವಿರ ದಿನ ಪೂರೈಸಿದ ಅಂಗವಾಗಿ ನಡೆಯುವ ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಕೇರಳ ಸಂಸ್ಕೃತಿ ಇಲಾಖೆ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಜಂಟಿ ವತಿಯಿಂದ ಈ ಸಮಾರಂಭ ನಡೆಯಿತು.
ಅಖಂಡತೆ ಸಾರಿದ್ದ ಪೈಗಳು
ಕಾರ್ಯಕ್ರಮ ಉದ್ಘಾಟಿಸಿದ ಮಂಜೇಶ್ವರ ತಹಶೀಲ್ದಾರ್ ಜಾನ್ ವರ್ಗೀಸ್ ಪಿ. ಮಾತನಾಡಿ, ಸಮಾಜದ ಪಿಡುಗುಗಳ ವಿರುದ್ಧ 180 ವರ್ಷಗಳ ಹಿಂದೆಯೇ ಧ್ವನಿ ಎತ್ತಿದ್ದ ಸಾಹುಕಾರ್ ನಾರಾಯಣ ಪೈಗಳಿಂದ ಮಂಜೇಶ್ವರ ಗೋವಿಂದ ಪೈ ಅವರ ವರೆಗಿನ ಸಾಧಕರ ಕೊಡುಗೆ ಅನನ್ಯ ಎಂದು ತಿಳಿಸಿದರು. ಭಾರತದ ಅಖಂಡತೆ ಕಾಯ್ದುಕೊಳ್ಳುವಲ್ಲಿ ಕಾವ್ಯಧಾರೆ ಹರಿಸಿದ್ದ ಗೋವಿಂದ ಪೈ ಅವರ ನಿವಾಸವೇ ಒಂದು ಅಶ್ರಮವಾಗಿತ್ತು ಎಂದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್. ಜಯಾನಂದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳ್ತಂಗಡಿ ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ| ಸುಬ್ರಹ್ಮಣ್ಯ ಕೆ. ಮತ್ತು ಹಿರಿಯ ಇತಿಹಾಸ ತಜ್ಞ, ನಿವೃತ್ತ ಉಪನ್ಯಾಸಕ ಡಾ| ಸಿ. ಬಾಲನ್ ಮಂಗಳೂರು ಸಹಪಂಕ್ತಿ ಭೋಜನ ಸಂಬಂಧ ಉಪನ್ಯಾಸ ನೀಡಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ. ಸಾಲ್ಯಾನ್, ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಅಧಿಕಾರಿ ಎ. ಅಬ್ದುಲ್ ಜಬ್ಟಾರ್ ಮುಖ್ಯ ಅತಿಥಿಗಳಾಗಿದ್ದರು. ಡಾ| ಕೆ. ಕಮಲಾಕ್ಷ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.