ಜಿಲ್ಲಾ ಆಡಳಿತ ಕೇಂದ್ರ: ಸೌಂದರೀಕರಣಕ್ಕೆ ಆದ್ಯತೆ
Team Udayavani, Jun 24, 2021, 4:30 AM IST
ಕಾಸರಗೋಡು: ಆಮೂಲಾಗ್ರ ಬದಲಾವಣೆ ಯೊಂದಿಗೆ ಕಾಸರಗೋಡು ಜಿಲ್ಲಾ ಆಡಳಿತ ಕೇಂದ್ರ ಸಮಗ್ರ ಶೋಭೆ ಪಡೆದಿದೆ. ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಮುತ್ಛಯದ ಆವರಣ ಶುಚೀಕರಣ ನಡೆಸಿ, ಹೂವುಗಳ ಸಸಿ ನೆಡುವಿಕೆ ಇತ್ಯಾದಿ ಸಮಗ್ರ ಸೌಂದರೀಕರಣ ಕಾಯಕ ನಡೆಸಲಾಗಿದೆ. ವಿವಿಧ ಇಲಾಖೆಗಳು ನೆಟ್ಟ ಸಸಿಗಳು ಬೆಳೆದು ಹೂವುಗಳು ಅರಳುತ್ತಿವೆ.
ಜಿಲ್ಲಾಧಿಕಾರಿ ಕಚೇರಿ ಆವರಣದ ಒಂದು ಭಾಗವನ್ನು ಓಪನ್ ಜಿಮ್ ಗಾಗಿ ನೀಡಲಾಗಿದೆ. ಜೀವನ ಶೈಲಿ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ವಲಯಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತೆ, ಆರೋಗ್ಯ ಇಲಾಖೆಯ, ಕ್ರೀಡಾ ಮಂಡಳಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಲಾದ ಆದ್ರಂಜಿಮ್ ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲೂ ಜಿಮ್ ಆರಂಭಿಸುವ ಯೋಜನೆಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಾಯಮ್ಮಾರಮೂಲೆ ತನ್ ಬೀಹುಲ್ ಇಸ್ಲಾಂ ಹೈ ಯರ್ ಸೆಕೆಂಡರಿ ಶಾಲೆಯಿಂದ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ಹಾದಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಅಧಿಕೃತ ವಸತಿ ವರೆಗಿನ ರಸ್ತೆಯನ್ನು ರೋಲರ್ ಸ್ಕೇಟಿಂಗ್ ತರಬೇತಿಗಾಗಿ ನವೀಕರಿಸಲಾವುದು.
ಇದರ ಪೂರ್ವಭಾವಿಯಾಗಿ ರಸ್ತೆಯ ಬದಿಗಳಲ್ಲಿ ಅಶೋಕ ಸಸಿಗಳನ್ನು ನೆಡುವ ಪ್ರಕ್ರಿಯೆ ನಡೆದುಬರುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಾಪೂಜಿ ಅವರ 150ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ತಾಮ್ರದ ಗಾಂಧಿ ಪ್ರತಿಮೆ ಅನಾವರಣ ಈಗಾಗಲೇ ನಡೆದು ಜಿಲ್ಲಾಧಿಕಾರಿ ಕಚೇರಿಯ ಶೋಭೆ ಹೆಚ್ಚಿಸಿದೆ. 22 ಲಕ್ಷ ರೂ. ವೆಚ್ಚದಲ್ಲಿ ಶಿಲ್ಪಿ ಉಣ್ಣಿ ಕಾನಾಯಿ ಅವರು ಈ ಪ್ರತಿಮೆ ನಿರ್ಮಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಶಿರಭಾಗದಲ್ಲಿ ರಾಜ್ಯ ಸರಕಾರದ ಲಾಂಛನ ಫಲಕ ಗಮನ ಸೆಳೆಯುತ್ತಿದೆ.