ಕಾಸರಗೋಡು ನಗರದ ಲೋಕೋಪಯೋಗಿ ರಸ್ತೆ ನವೀಕರಣ : ಸಚಿವ ಜಿ. ಸುಧಾಕರನ್
Team Udayavani, Mar 25, 2017, 4:51 PM IST
ಕಾಸರಗೋಡು: ಕಾಸರಗೋಡು ನಗರದ ಪ್ರಮುಖ ಲೋಕೋಪಯೋಗಿ ರಸ್ತೆಗಳನ್ನು ಅಭಿವೃದ್ಧಿ ಯೋಜನೆಯಲ್ಲಿ ಸೇರ್ಪಡೆ ಗೊಳಿಸಿ ರಸ್ತೆಗಳನ್ನು ನವೀಕರಿಸಲಾಗು ವುದೆಂದು ಲೋಕೋಪಯೋಗಿ ಖಾತೆ ಸಚಿವ ಜಿ.ಸುಧಾಕರನ್ ಹೇಳಿದರು.
ಬೆದ್ರಡ್ಕ ಭೆಲ್ ಜಂಕ್ಷನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀಕರಿಸಿದ ನೀರ್ಚಾಲು – ಶಿರಿಬಾಗಿಲು – ಭೆಲ್ – ಕಂಬಾರ್ ರಸ್ತೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಾಸರಗೋಡು, ಇಡುಕ್ಕಿ, ವಯನಾಡು, ಪತ್ತನಂತಿಟ್ಟ ಜಿಲ್ಲೆಗಳ ರಸ್ತೆಗಳನ್ನು ನವೀಕರಿಸಲಾಗುವುದು. 15 ವರ್ಷಗಳ ಗ್ಯಾರಂಟಿಯೊಂದಿಗೆ ರಸ್ತೆ ನವೀಕರಣ ಗುತ್ತಿಗೆ ನೀಡಲಾಗುವುದು. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದ ಸಚಿವರು ಮಳೆ ಆರಂಭಕ್ಕೆ ಮುನ್ನವೇ ತುರ್ತಾಗಿ ಹೊಂಡ ಬಿದ್ದ ರಸ್ತೆಗಳ ದುರಸ್ತಿಗೊಳಿಸಲಾಗುವುದು ಎಂದರು.
ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಕುಂಞಿ ಚಾಯಂಡಡಿ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್, ಸ್ಥಾಯೀ ಸಮಿತಿ ಅಧ್ಯಕ್ಷ ಮುಜೀಬ್ ಕಂಬಾರ್ ಮೊದಲಾದವರು ಭಾಗವಹಿಸಿದರು.