ಪೌಷ್ಟಿಕ ಆಹಾರ ಮಾಸಾಚರಣೆ: ಅಂಗನವಾಡಿಗಳಲ್ಲಿ ಜಾಗೃತಿ
Team Udayavani, Sep 14, 2020, 5:33 PM IST
ಮಧೂರು ಗ್ರಾಮ ಪಂಚಾಯತ್ ನ ಭಗವತಿ ನಗರದಲ್ಲಿ ನೇರಳೆ ಬಣ್ಣದ ಪೋಷಕಾಹಾರದ ಬಗ್ಗೆ ಮಾಹಿತಿ ನೀಡಲಾಗುತ್ತಿರುವುದು.
ಕಾಸರಗೋಡು: ಪೋಷಣ್ ಅಭಿಯಾನ್ ಯೋಜನೆ ಮೂಲಕ ಪೌಷ್ಟಿಕ ಆಹಾರ ಮಾಸಾಚರಣೆ ಅಂಗವಾಗಿ ಆಯಾ ದಿನಗಳನ್ನು ಬಣ್ಣಗಳ ಮೂಲಕ ವಿಂಗಡಿಸಿ ಮಕ್ಕಳಿಗೆ, ಅವರ ಕುಟುಂಬದ ಸದಸ್ಯರಿಗೆ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಕಾಸರಗೋಡು ಜಿಲ್ಲಾ ಐ.ಸಿ.ಡಿ.ಎಸ್. ಪ್ರೋಗ್ರಾಂ ಆಫೀಸ್ ನೇತೃತ್ವದಲ್ಲಿ ವಿವಿಧ ಅಂಗನವಾಡಿಗಳಲ್ಲಿ ಈ ಕಾಯಕ ನಡೆದುಬರುತ್ತಿದೆ.
ಈ ಸರಣಿಯಲ್ಲಿ ಶನಿವಾರವನ್ನು “ನೇರಳೆ(ವಯಲೆಟ್) ಬಣ್ಣದ ದಿನ’ ಎಂದು ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ನೇರಳೆ ಬಣ್ಣದ ತರಕಾರಿ, ಹಣ್ಣು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮಕ್ಕಳಿಗೂ ನೇರಳೆ ಬಣ್ಣದ ಉಡುಪು ಧರಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಇಂಡಿಗೋ, ನೀಲ, ಹಸುರು, ಹಳದಿ, ಕಿತ್ತಳೆ, ಕೆಂಪು ಇತ್ಯಾದಿ ಬಣ್ಣಗಳಲ್ಲಿ ದಿನಗಳನ್ನು ವಿಂಗಡಿಸಲಾಗುವುದು. ತಿಂಗಳ ಕೊನೆಯಲ್ಲಿ ಕಾಮನಬಿಲ್ಲಿನ ರೀತಿ ಎಲ್ಲ ಬಣ್ಣಗಳನ್ನು ಬಳಸಿರುವ ಪೋಷಕಾಹಾರ ಬಗ್ಗೆ ಮಾಹಿತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.