“ಪ್ರಜಾತಂತ್ರ, ಮತೇತರ ಮೌಲ್ಯ ಕಾಪಾಡಿ’
Team Udayavani, Aug 15, 2021, 8:10 PM IST
ಕಾಸರಗೋಡು: ಹಿರಿಯ ತಲೆ ಮಾರು ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯದ ಹಿರಿಮೆ ಗರಿಮೆಯನ್ನು ಕಾಯ್ದುಕೊಳ್ಳಲು ಪ್ರಜಾತಂತ್ರ, ಮತೇತರ ಮೌಲ್ಯಗಳನ್ನು ಕಾಪಾಡಬೇಕಾದುದು ಅನಿವಾರ್ಯವೆಂದು ಬಂದರು, ವಸ್ತುಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಹೇಳಿದರು.
ವಿದ್ಯಾನಗರದ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣಗೈದು, ಧ್ವಜ ವಂದನೆ ಸ್ವೀಕರಿಸಿ ಸಚಿವರು ಮಾತನಾಡಿದರು.
ವಿವಿಧ ಭಾಷೆ, ಸಂಸ್ಕೃತಿಗಳಿದ್ದರೂ ಇವುಗಳೆಲ್ಲವನ್ನು ಒಂದುಗೂಡಿಸುವ ಭಾರತೀಯ ಸಂವಿಧಾನವನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ನಮ್ಮ ದೇಶ ಎದುರಿ ಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಕೃಷಿ, ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿನ ಸಾಧನೆ ಶ್ಲಾಘನೀಯ ಎಂದರು.
ಇದನ್ನೂ ಓದಿ:ಕಲಹ ಪೀಡಿತ ಕಾಬೂಲ್ ನಿಂದ ದೆಹಲಿಗೆ ಬಂದಿಳಿದ 129 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಪಿ.ಬಿ. ರಾಜೀವ್, ಶಾಸಕರಾದ ಎನ್. ಎ. ನೆಲ್ಲಿಕುನ್ನು, ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎ.ಕೆ.ಎಂ. ಅಶ್ರಫ್, ಜಿ.ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೊದಲಾದವರಿದ್ದರು.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅತೀ ಕಟ್ಟುನಿಟ್ಟುಗಳೊಂದಿಗೆ ಕಾರ್ಯಕ್ರಮ ಜರಗಿತು. ಆಹ್ವಾನಿತ 100 ಮಂದಿಗೆ ಮಾತ್ರ ಪ್ರವೇಶಾತಿ ಇತ್ತು. ವಯೋವೃದ್ಧರು ಮತ್ತು ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪಥಸಂಚಲನದಲ್ಲಿ ಎನ್.ಸಿ.ಸಿ., ಎಸ್.ಪಿ.ಸಿ., ಸ್ಕೌಟ್ ಮತ್ತು ಗೈಡ್ಸ್, ಎನ್.ಸಿ.ಸಿ. ಜೂನಿಯರ್ ಡಿವಿಝನ್ ಪ್ಲಾಟೂನ್ಗಳು ಭಾಗವಹಿಸಲಿಲ್ಲ.
ಮಕ್ಕಳ ದೇಶಭಕ್ತಿ ಗಾಯನ, ಪದಕ ಪ್ರದಾನ ಇತ್ಯಾದಿ ಸಮಾರಂಭಗಳು ಇರಲಿಲ್ಲ. ಮೂವರು ವೈದ್ಯರು, ಇಬ್ಬರು ದಾದಿಯರು, ಇಬ್ಬರು ಪಾರಾ ಮೆಡಿಕಲ್ ಸಿಬಂದಿ, ಮೂವರು ಶುಚೀಕರಣ ಕಾರ್ಮಿಕರು, ಕೋವಿಡ್ ಮುಂಚೂಣಿ ಹೋರಾಟಗಾರರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ. ಆಹ್ವಾನಿತರು ಥರ್ಮಲ್ ಸ್ಕಾನಿಂಗ್ಗೆ ಒಳಗಾದ ಬಳಿಕ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾನಿಟೈಸರ್ ಮಾಡಿ ಪ್ರವೇಶ ನೀಡಲಾಯಿತು.