ನಿರಾಶಾದಾಯಕ ಬಜೆಟ್ : ಪಿ. ರಮೇಶ್
Team Udayavani, Feb 16, 2019, 1:00 AM IST
ಕಾಸರಗೋಡು: 2019-20 ನೇ ಸಾಲಿನ ಕಾಸರಗೋಡು ನಗರಸಭಾ ಬಜೆಟ್ ಕಾಸರಗೋಡು ನಗರವನ್ನು ದಶಕಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದು, ನಿರಾಶಾದಾಯಕ ಎಂದು ವಿಪಕ್ಷ ನಾಯಕ ಪಿ.ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ ಮಂಡಿಸಿದ ಬಜೆಟ್ನಲ್ಲಿ ಸೂಚಿಸಿದ ಹಲವು ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ. ಈ ಬಾರಿಯ ಬಜೆಟ್ ಕಳೆದ ವರ್ಷದ ಪ್ರತಿಯಾಗಿದೆ. ಕಳೆದ ವರ್ಷದ 50 ಕ್ಕೂ ಅಧಿಕ ಯೋಜನೆಗಳು ಇನ್ನೂ ಸಾಕಾರಗೊಂಡಿಲ್ಲ. ಈ ಬಾರಿ ಕೃಷಿ, ಮೀನುಗಾರಿಕೆ, ಶಿಕ್ಷಣ ಮೊದಲಾದವುಗಳನ್ನು ಅವಗಣಿಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿ ನಲ್ಲಿ ಇದರ ಪರಿಹಾರಕ್ಕೆ ಯಾವುದೇ ಸ್ಪಷ್ಟ ಯೋಜನೆಯಿಲ್ಲ.
ನುರಿತ ಉದ್ಯೋಗಸ್ಥರ ಕೊರತೆ ಮತ್ತು ಅಧಿಕಾರಿಗಳ ವರ್ಗಾವಣೆಯಿಂದಾಗಿ ಕಳೆದ ವರ್ಷದ ಹಲವು ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ ಎಂದು ಬಜೆಟ್ನಲ್ಲಿ ಪ್ರಸ್ತಾವಿಸಿರುವುದರಿಂದ ನಗರಸಭೆಯ ಅಭಿವೃದ್ಧಿ ನಿರ್ವಹಣೆಯಲ್ಲಿನ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ. ಈ ಕಾರಣದಿಂದಲೇ ಅಧಿಕಾರಾರೂಢ ಪಕ್ಷದ ಸದಸ್ಯರೂ ಕೂಡಾ ಬಜೆಟ್ನ್ನು ಧ್ವನಿಮತದಿಂದ ಸ್ವೀಕರಿಸಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಬಗ್ಗೆ ಆಡಳಿತ ಪಕ್ಷದ ಸದಸ್ಯರೂ ಡೆಸ್ಕ್ ಬಡಿದು ಸ್ವಾಗತಿಸಲಿಲ್ಲ ಎಂದರು.
ಪಲಾಯನವಾದ
ಬಜೆಟ್ ಮಂಡನೆ ಪ್ರಕ್ರಿಯೆ ಬೆಳಗ್ಗೆ 11.15ಕ್ಕೆ ಮುಗಿದಿದ್ದರೂ, ಬಜೆಟ್ ಮೇಲಿನ ಚರ್ಚೆಯನ್ನು ಅಪರಾಹ್ನ 2.30ಕ್ಕೆ ಇರಿಸಿದ್ದು ಪಲಾಯನವಾದವಾಗಿದೆ ಎಂದು ಪ್ರತಿಕ್ರಿಯಿಸಿದ ಅವರು ಬಜೆಟ್ನಲ್ಲಿ ಯಾವುದೇ ಹೊಸತನವಾಗಲಿ, ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳಾಗಲಿ ಇಲ್ಲದಿರುವುದರಿಂದ ಚರ್ಚೆಯನ್ನು ಅಪರಾಹ್ನಕ್ಕೆ ಇರಿಸಿದೆ ಎಂದಿದ್ದಾರೆ.