ದ.ಕ. ಜಿಲ್ಲೆ: 9 ಮಂದಿ ಸಾವು, 243 ಪಾಸಿಟಿವ್
Team Udayavani, Aug 11, 2020, 11:31 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 243 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದೇ ವೇಳೆ 9 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ. 519 ಮಂದಿ ಗುಣಮುಖರಾಗಿದ್ದಾರೆ.
23 ಮಂದಿಗೆ ಸೋಂಕಿತರ ಸಂಪರ್ಕದಿಂದ, 123 ಮಂದಿಗೆ ಇನ್ಫ್ಲೂಯೆನಾ ಲೈಕ್ ಇಲ್ನೆಸ್, 9 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ ದೃಢಪಟ್ಟಿದೆ. 88 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ದೃಢ ಪ್ರಕರಣಗಳ ಪೈಕಿ 189 ಮಂದಿ ಮಂಗಳೂರು, 30 ಮಂದಿ ಬಂಟ್ವಾಳ, 6 ಮಂದಿ ಪುತ್ತೂರು, ನಾಲ್ವರು ಸುಳ್ಯ, 10 ಮಂದಿ ಬೆಳ್ತಂಗಡಿ ಹಾಗೂ ನಾಲ್ವರು ಹೊರ ಜಿಲ್ಲೆಯವರಾಗಿದ್ದಾರೆ.
ಸೋಂಕಿತರಲ್ಲಿ 94 ಪುರುಷರು, 43 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 75 ಮಂದಿ ಪುರುಷರು ಮತ್ತು 31 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ.
ಮೂಲ್ಕಿ: 5 ಪಾಸಿಟಿವ್
ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ಮಂಗಳವಾರ 5 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಾರ್ನಾಡು ಸದಾಶಿವ ನಗರದ ಮಹಿಳೆ, ಬಪ್ಪನಾಡು ಅಕ್ಕಸಾಲಿಗರ ಕೇರಿಯ ಮಹಿಳೆ ಹಾಗೂ ಪುರುಷ, ಕಟೀಲು ನಡುಗೋಡಿನ ಪುರುಷ, ಕೆಮ್ರಾಲ್ ಗ್ರಾಮದ ಮುಲ್ಲೊಟ್ಟಿನ ಪುರುಷ ಬಾಧಿತರು.
ಬಂಟ್ವಾಳ: 23 ಪಾಸಿಟಿವ್
ಬಂಟ್ವಾಳ: ತಾಲೂಕಿನಲ್ಲಿ ಮಂಗಳವಾರ 23 ಮಂದಿಗೆ ಕೊರೊನಾ ದೃಢಪಟ್ಟಿದೆ. ಬಿ.ಸಿ. ರೋಡ್, ಬಂಟ್ವಾಳ, ಇರಾ, ನಾವೂರು, ಬಿ.ಮೂಡ, ವಿಟ್ಲ, ಮಣಿನಾಲ್ಕೂರಿನ ತಲಾ ಇಬ್ಬರು, ಬಡಗಬೆಳ್ಳೂರು, ಕರಿಯಂಗಳ, ಅನಂತಾಡಿ, ಪಾಣೆಮಂಗಳೂರು, ತುಂಬೆ, ಪೆರುವಾಯಿ, ಕೇಪು, ಸಜೀಪನಡು, ಫರಂಗಿಪೇಟೆಯ ತಲಾ ಒಬ್ಬೊಬ್ಬರು ಬಾಧಿತರಾಗಿದ್ದಾರೆ. ಮೃತಪಟ್ಟ 9 ಮಂದಿಯ ಪೈಕಿ 9 ಮಂದಿ ಮಂಗಳೂರಿನವರು ಹಾಗೂ ಓರ್ವ ಹೊರ ಜಿಲ್ಲೆಯವರಾಗಿದ್ದಾರೆ.
ಪುತ್ತೂರು, ಕಡಬ: 9 ಪ್ರಕರಣ ದೃಢ
ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಮಂಗಳವಾರ ಒಟ್ಟು 9 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಬೆಟ್ಟಂಪಾಡಿಯ ಮಹಿಳೆ ಮತ್ತು ಪುರುಷ, ತಿಂಗಳಾಡಿಯ ಮಹಿಳೆ, ಕೆಮ್ಮಿಂಜೆಯ ಪುರುಷ, ಮಹಿಳೆ ಮತ್ತು ಬಾಲಕ, ಪರ್ಲಡ್ಕದ ಮಹಿಳೆ, ಕೂರ್ನಡ್ಕದ ಪುರುಷ, ಕಡಬ ತಾಲೂಕು ಕಾಣಿಯೂರಿನ ಪುರುಷ ಬಾಧಿತರಾಗಿದ್ದಾರೆ.
ವೃದ್ಧ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ಕಬಕ ಶೇವಿರೆಯ 80 ವರ್ಷದ ವ್ಯಕ್ತಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮಂಗಳವಾರ ಮೃತಪಟ್ಟಿದ್ದಾರೆ. ಅವರನ್ನು ಕೊರೊನಾ ಬಾಧಿಸಿ ರುವುದು ದೃಢಪಟ್ಟಿದೆ. ಮೊದಲಿನ ಕೋವಿಡ್- 19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಎರಡನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.