ಕರಾವಳಿಯಲ್ಲಿ ಸಂಭ್ರಮದ ಈಸ್ಟರ್ ಆಚರಣೆ
Team Udayavani, Apr 10, 2023, 6:25 AM IST
ಮಂಗಳೂರು: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಅನ್ನು ಕ್ರೈಸ್ತ ಬಾಂಧವರು ಎ. 9ರಂದು ಕರಾವಳಿಯಾದ್ಯಂತ ಚರ್ಚ್ಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಚರ್ಚ್ಗಳಲ್ಲಿ ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗೆ ಈಸ್ಟರ್ ಬಲಿಪೂಜೆಗಳು ನಡೆದವು.
ಮಂಗಳೂರು ಬಿಷಪ್ ರೆ|ಫಾ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಂಟ್ವಾಳ ತಾಲೂಕಿನ ವಾಮದ ಪದವಿನ ಇನ್ಫೆಂಟ್ ಜೀಸಸ್ ಚರ್ಚ್ನಲ್ಲಿ ರವಿವಾರ ಈಸ್ಟರ್ ಹಬ್ಬದ ಸಂಭ್ರಮದ ಬಲಿ ಪೂಜೆಯನ್ನು ನಡೆಸಿದರು. ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಸ್ಥಳೀಯ ಧರ್ಮ ಗುರುಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಹೊಸ ಅಗ್ನಿಯ ಆಶೀರ್ವಚನ ದೊಂದಿಗೆ ಕಾರ್ಯಕ್ರಮ ಆರಂಭ ವಾಯಿತು. ಹೊಸ ಅಗ್ನಿಯಿಂದ ಈಸ್ಟರ್ ಮೊಂಬತ್ತಿಯನು ಧರ್ಮಾಧ್ಯಕ್ಷರು, ಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಆ ಅಗ್ನಿಯ ಮೂಲಕ ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸಿ ದರು. ಬೈಬಲ್ನ ಹಳೆಯ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗ ಗಳ ವಾಚನದ ಬಳಿಕ ಬಿಷಪರು, ಧರ್ಮಗುರುಗಳು ಪ್ರವಚನ ಮತ್ತು ಸಂದೇಶ ನೀಡಿದರು.
ಪವಿತ್ರ ಜಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸದ ಸತ್ಯದ ಮರು ದೃಢೀಕರಣ ನಡೆಯಿತು. ಕ್ರೈಸ್ತ ಸಂತರನ್ನು ಸ್ಮರಿಸಿ ಅವರ ಶುಭಾ ಶೀರ್ವಾದಗಳನ್ನು ಕೋರಲಾಯಿತು.
ಬಲಿ ಪೂಜೆಯ ಬಳಿಕ ಭಾಗವಹಿ ಸಿದ ಕ್ರೆಸ್ತ ಬಾಂಧವರು ಹಬ್ಬದ ಶುಭಾ ಶಯಗಳನ್ನು ವಿನಿಮಯ ಮಾಡಿ ಕೊಂಡರು. ಬಳಿಕ ಕ್ರೈಸ್ತ ಬಾಂಧವರು ತಂತಮ್ಮ ಮನೆಗಳಲ್ಲಿ ಈಸ್ಟರ್ ಹಬ್ಬದ ಊಟ ಸವಿದರು.
ವಾಮದಪದವಿನ ಕರಿಮಲೆ ಚರ್ಚ್
ಬಂಟ್ವಾಳ: ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಾಮದಪದವಿನ ಕರಿಮಲೆ ಇನೆ#ಂಟ್ ಜೀಸಸ್ ಚರ್ಚ್ನಲ್ಲಿ ಈಸ್ಟರ್ ಹಬ್ಬದ ಬಲಿಪೂಜೆಯನ್ನು ನೆರವೇರಿಸಿದರು.
ಬಿಷಪ್ ಅವರು ಪ್ರತೀ ವರ್ಷ ಒಂದೊಂದು ಚರ್ಚ್ಗಳಿಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಕರಿಮಲೆ ಚರ್ಚ್ಗೆ ಭೇಟಿ ನೀಡಿದ್ದರು. ಪ್ರಾರಂಭದಲ್ಲಿ ಬಿಷಪ್ ಅವರನ್ನು ಚರ್ಚ್ ಪಾಲನಾ ಮಂಡಳಿ ವತಿಯಿಂದ ಮಾಲಾರ್ಪಣೆ ಮೂಲಕ ಸ್ವಾಗತಿಸಲಾಯಿತು.
ಬಳಿಕ ಏಸು ಕ್ರಿಸ್ತರ ಪುನರುತ್ಥಾನದ ಮಹತ್ವದ ಕುರಿತು ಸಂದೇಶ ನೀಡಲಾಯಿತು. ಕರಿಮಲೆ ಚರ್ಚ್ನ ಧರ್ಮಗುರು ಫಾ| ಲಿಯೋ ವೇಗಸ್ ಬಲಿಪೂಜೆ ಸಹಕರಿಸಿದರು. ಪಾಲನಾ ಮಂಡಳಿ ಉಪಾಧ್ಯಕ್ಷ ಆಲ್ಬರ್ಟ್ ಡಿ’ ಸೋಜಾ, ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು.
ಉಡುಪಿಯಲ್ಲಿ
ಈಸ್ಟರ್ ಹಬ್ಬದ ಪ್ರಯುಕ್ತ ರವಿವಾರ ಬೆಳಗ್ಗೆ ಚರ್ಚ್ಗಳಲ್ಲಿ ಪೂಜೆ ನೆರ ವೇರಿತು. ಬಳಿಕ ಕೆಲವು ಚರ್ಚ್ಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಕ್ರೈಸ್ತ ಬಾಂಧವರ ಮನೆಗಳಲ್ಲಿ ಭೋಜನ ಕೂಟವೂ ನಡೆಯಿತು.
ಪುನರುತ್ಥಾನದ ಹಬ್ಬ
ಕ್ರೈಸ್ತ ಸಭೆಯು ವಿಭೂತಿ ಬುಧವಾರದಿಂದ ಮೊದಲ್ಗೊಂಡು ಈಸ್ಟರ್ ಹಬ್ಬದ ವರೆಗಿನ 40 ದಿನಗಳ ತನಕ ವ್ರತಾಚರಣೆಗೆ ಕರೆ ನೀಡುತ್ತದೆ. ಈ ಅವಧಿಯ ಕೊನೆಯ 7 ದಿನಗಳನ್ನು ಪವಿತ್ರ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ. ಗರಿಗಳ ರವಿವಾರದೊಂದಿಗೆ ಪ್ರಾರಂಭಗೊಳ್ಳುವ ಈ ಸಪ್ತಾಹ ಈಸ್ಟರ್ ರವಿವಾರ ಮುಕ್ತಾಯ ಗೊಳ್ಳುತ್ತದೆ. ಈ ಸಪ್ತಾಹದ ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನ, ಶನಿವಾರ ಈಸ್ಟರ್ ಹಬ್ಬದ ಜಾಗರಣೆ ಮತ್ತು ರವಿವಾರ ಈಸ್ಟರ್ ಅಥವಾ ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನಗೊಂಡ ಹಬ್ಬವನ್ನು ಆಚರಿಸಲಾಗುತ್ತದೆ.