Gurupura ಕೈಕಂಬ: ರಿಕ್ಷಾ ಪಲ್ಟಿ; ಚಾಲಕ ಸಾವು
Team Udayavani, Dec 13, 2023, 12:41 AM IST
ಕೈಕಂಬ: ಗುರುಪುರ ಕೈಕಂಬ ನಾಡಾಜೆ ರಸ್ತೆಯಲ್ಲಿ ಡಿ. 10ರಂದು ರಿಕ್ಷಾ ಪಲ್ಟಿಯಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಡಾಜೆ ಅರ್ಬಿಯ ರಿಕ್ಷಾ ಚಾಲಕ ಬೂಬ ಕುಲಾಲ್ (49) ಚಿಕಿತ್ಸೆ ಫಲಕಾರಿಯಾಗದೆ ಡಿ. 11ರಂದು ರಾತ್ರಿ ಮೃತಪಟ್ಟಿದ್ದಾರೆ.
ಬೂಬ ಕುಲಾಲ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಆಗಲಿದ್ದಾರೆ. ಡಿ. 10ರಂದು ಮನೆಯಿಂದ ಊಟ ಮುಗಿಸಿ, ಗುರುಪುರ ಕೈಕಂಬದ ರಿಕ್ಷಾ ಸ್ಟಾಂಡ್ಗೆ ಬರುತ್ತಿದ್ದ ವೇಳೆ ನಾಡಾಜೆಯ ಸಮೀಪ ಹಠಾತ್ ಆಗಿ ಕೋತಿಯೊಂದು ರಿಕ್ಷಾಕ್ಕೆ ಅಡ್ಡ ಬಂದ ಕಾರಣ ಅವರು ರಿಕ್ಷಾವನ್ನು ಎಡಬದಿಗೆ ಚಲಾಯಿಸಿದಾಗ ರಿಕ್ಷಾ ಪಲ್ಟಿಯಾಗಿ ಸುಮಾರು 20 ಅಡಿಯ ಅಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.
ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಯಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಬೂಬ ಕುಲಾಲ್ ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದರು.
ಅಂತಿಮ ಯಾತ್ರಾ ಮೆರವಣಿಗೆ
ಕೈಕಂಬದ ರಿಕ್ಷಾ ಚಾಲಕ-ಮಾಲಕ ಸಂಘದವರು ಬೂಬ ಕುಲಾಲ್ ಅವರ ಪಾರ್ಥಿವ ಶರೀರವನ್ನು ಪೊಳಲಿ ದ್ವಾರದಿಂದ ಮೆರವಣಿಗೆಯಲ್ಲಿ ಕೈಕಂಬ ಪೇಟೆಯವರೆಗೆ ತಂದು ಅಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಿಸಿದ ಬಳಿಕ ಅವರ ಮನೆಯವರೆಗೆ ಅಂತಿಮ ಯಾತ್ರೆಯ ಮೆರವಣಿಗೆಯನ್ನು ನಡೆಸಲಾಯಿತು. ಎಲ್ಲ ರಿಕ್ಷಾ ಚಾಲಕ ಮಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.