ಬರೀ ಸುಂಕ ಕಟ್ಟಿದರೆ ಸಾಕೇ? ರಸ್ತೆ ಬೇಡವೇ?
Team Udayavani, Jul 17, 2019, 5:00 AM IST
ಸುರತ್ಕಲ್: ಮುಕ್ಕ- ಸುರತ್ಕಲ್ ಟೋಲ್ಗೇಟ್ನಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೂ ಟೋಲ್ ಸಂಗ್ರಹಿಸುವ (ಒಂದು ಬಾರಿಗೆ 25 ರೂ. ನಂತೆ) ಪದ್ಧತಿ ಜಾರಿಗೆ ಜಿಲ್ಲಾಧಿಕಾರಿಗಳು ಮೂರು ದಿನಗಳ ತಡೆ ನೀಡಿದ್ದಾರೆ. ವಿವಿಧ ಪಕ್ಷಗಳ ಮುಖಂಡರು, ವಿವಿಧ ನಾಗರಿಕ ಸಮಿತಿಗಳು ಶಾಶ್ವತ ಪರಿಹಾರವಾಗಿ ಸುಂಕ ವಸೂಲು ಮಾಡದಂತೆ ಆದೇಶಿಸ ಬೇಕೆಂದು ಪಟ್ಟು ಹಿಡಿದಿದ್ದಾರೆ.
ವಿಚಿತ್ರವೆಂದರೆ, ಈ ರಸ್ತೆಯಲ್ಲಿ ಸಾಗುವುದೇ ಒಂದು ಪ್ರಯಾಸದ ಸಂಗತಿ. ನಿನ್ನೆಯ ಸಂಚಿಕೆಯಲ್ಲಿ (ಜು. 16) ಪ್ರಕಟಿಸಿದ ಏಳು ಚಿತ್ರಗಳು ಒಂದೇ ಸ್ಥಳದ್ದು. ಅಂದರೆ ಆಸುಪಾಸಿನ ಚಿತ್ರಗಳು. ಹಾಗೆಂದು ಅಲ್ಲಿ ಮಾತ್ರ ಈ ಸಮಸ್ಯೆ ಎಂದುಕೊಂಡರೆ ತಪ್ಪು. ಬೇರೆ ವಾಹನಗಳ ಸವಾರರು ಸುತ್ತಮುತ್ತಲಿನ ಲೆಕ್ಕದಲ್ಲಿ ದುಬಾರಿಯೆನ್ನುವಷ್ಟು ಸುಂಕ ಕಟ್ಟಿಯೂ ಸಾಗಬೇಕಾದದ್ದು ಇಷ್ಟು ಹಾಳಾದ ರಸ್ತೆಯಲ್ಲಿ. ಸುಂಕ ಕಟ್ಟಿ ಜೇಬಿಗೆ ನಷ್ಟ ಮಾಡಿಕೊಂಡದ್ದಲ್ಲದೇ, ವಾಹನಗಳ ದುರಸ್ತಿಗೆ ಮತ್ತಷ್ಟು ಹಣ ಕಟ್ಟಬೇಕಾದ ಅನಿವಾರ್ಯತೆ ಸಾರ್ವಜನಿಕರದ್ದು.
ಪ್ರಮುಖ ರಾಷ್ಟ್ರೀಯ ಹೆದ್ದಾರಿ 66 ರ ಸ್ಥಿತಿ ಹೇಳತೀರದು. ಈ ಹೆದ್ದಾರಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಥೆ ಮುಗಿ ದಂತೆಯೇ ಎನ್ನುತ್ತಾರೆ ಹಲವು ವಾಹನ ಸವಾರರು.
ಪ್ರತ್ಯಕ್ಷ ಅನುಭವ
ಕೇವಲ, ಸುರತ್ಕಲ್ನಿಂದ ಬೈಕಂಪಾಡಿಯವರೆಗೆ ಸಂಚರಿಸಿ. ನಿಮ್ಮ ಅನುಭವಕ್ಕೆ ಬರುವುದು ಯಾವುದೋ ಜಿ.ಪಂ. ಅಥವಾ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ(ಇತ್ತೀಚೆಗೆ ಕೆಲವು ಜಿ.ಪಂ ರಸ್ತೆಗಳು ಹೆದ್ದಾರಿಯನ್ನೂ ನಾಚಿಸುವಂತಿವೆ ಎನ್ನುವುದೂ ಸುಳ್ಳಲ್ಲ) ಸಾಗಿದಂತೆ ಭಾಸವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಉತ್ತಮ ಗುಣಮಟ್ಟವೆನಿಸದ ರಸ್ತೆ ನಿರ್ಮಾಣ, ಅವೈಜ್ಞಾನಿಕ ತೇಪೆ ಕಾಮಗಾರಿ ಗಳು. ಟೋಲ್ ಗೇಟ್ಗೆಅನತಿ ದೂರದಲ್ಲೇ ಒಂದೇ ಮಳೆಗೆ ಹೊಂಡ ನಿರ್ಮಾಣವಾಗಿದೆ. ಹಾಗೆಯೇ ಮುಂದುವರಿಯಿರಿ, ಎನ್ಐಟಿಕೆ ಮುಂಭಾಗ ಕೈಗೊಂಡ ತೇಪೆ ಕಾಮಗಾರಿ ಅನುಭವಕ್ಕೆ ಬರುತ್ತದೆ. ಹಾಗಾಗಿ ವಾಹನ ಕುಲುಕಾಟ ತಪ್ಪಿದ್ದಲ್ಲ. ಏರು ತಗ್ಗು, ರಸ್ತೆಯ ಅಂಚಿನಲ್ಲಿ ಕಂದಕಗಳೂ ಸೃಷ್ಟಿಯಾಗಿ ವಾಹನ ಸವಾರರನ್ನು ಅಪಾಯದಲ್ಲಿ ಸಿಲುಕಿಸುವುದಂತೂ ಖಚಿತ.
ಮಳೆ ನೀರು ಸರಾಗವಾಗಿ ಹರಿದು ಹೋಗದೆ ಹೆದ್ದಾರಿ ಬದಿ ಶೇಖರಣೆಗೊಂಡು ದ್ವಿಚಕ್ರ ಸವಾರ ರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.ಸವಾರರು ಆಯತಪ್ಪಿ ಬಿದ್ದರೂ ಅಚ್ಚರಿ ಪಡುವಂತಿಲ್ಲ. ಇನ್ನು ಸುರತ್ಕಲ್ ಸೂರಜ್ ಹೋಟೆಲ್ ಮುಂಭಾಗ ಅಪಾಯಕಾರಿ ತಿರುವು ಮತ್ತು ತಿರುವಿನಲ್ಲಿ ಹೊಂಡ ಅಪಾಯವನ್ನು ಆಹ್ವಾನಿಸುತ್ತಿದೆ. ಇದಾವುದೂ ಸುಂಕ ವಸೂಲು ಮಾಡುವ ಕಂಪೆನಿಗಾಗಲೀ, ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕಾಗಲೀ ತೋರಿಲ್ಲ, ಹಾಗಾಗಿ ದುರಸ್ತಿಗೊಂಡಿಲ್ಲ.
ಎನ್ಐಟಿಕೆ ಟೋಲ್ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ರಿಯಾಯಿತಿ ಮೂರು ದಿನಗಳಿ ರಬಹುದು. ಆದರೆ ಶಾಶ್ವತವಾಗಿ ವಸೂಲು ಮಾಡ ಬಾರದೆಂದು ನಾಗರಿಕರ ಪ್ರತಿಭಟನೆ ಆರಂಭವಾಗಿದೆ. ಆದರೆ ರಾ. ಹೆದ್ದಾರಿ ಸಚಿವಾಲಯ, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಈ ಕೂಡಲೇ ಗಮನಿಸಬೇಕಾದದ್ದು ರಸ್ತೆಯ ಸ್ಥಿತಿ. ಹೀಗಿದ್ದ ಮೇಲೂ ಸುಂಕ ಕಟ್ಟುವ ಜನರ ಸಂಕಷ್ಟಕ್ಕೆ ನೆರವಾಗಬೇಕು. ಈ ನಿಟ್ಟಿನಲ್ಲಿ ಈ ಟೋಲ್ಗೇಟ್ ನ್ನು ತೆಗೆದು ಹಾಕುವತ್ತ ಜಿಲ್ಲಾಡಳಿತ ಸೇರಿ ದಂತೆ ಎಲ್ಲ ಇಲಾಖೆಗಳು ಕಾರ್ಯೋನ್ಮುಖ ವಾಗಬೇಕು. ಇದು ಜನರ ಆಗ್ರಹ.
ಲಕ್ಷ್ಮೀನಾರಾಯಣ ರಾವ್