ಕಿಲ್ಪಾಡಿ: ಪಂ.ಸಭಾಂಗಣಕ್ಕೆ ಸ್ವಂತ ಜಾಗವಿಲ್ಲ!
ಅತೀ ಕಡಿಮೆ ಆದಾಯದ ದೊಡ್ಡ ಗ್ರಾಮಕ್ಕೆ ಅನುದಾನದ ಕೊರತೆ
Team Udayavani, Sep 22, 2022, 12:18 PM IST
ಮೂಲ್ಕಿ: ಕೃಷಿಯೇ ಪ್ರಧಾನವಾಗಿರುವ, ಅತೀ ಕಡಿಮೆ ಆದಾಯ ಹೊಂದಿರುವ, ಗಾತ್ರದಲ್ಲಿ ದೊಡ್ಡದಾಗಿರುವ ಗ್ರಾಮ ಮೂಲ್ಕಿಯ ಕಿಲ್ಪಾಡಿ. ಇಡೀ ಕಿಲ್ಪಾಡಿ ಗ್ರಾಮ ಪಂಚಾಯತ್ಗೆ ಕಿಲ್ಪಾಡಿ ಒಂದೇ ವ್ಯಾಪ್ತಿ. ಹಿಂದೊಮ್ಮೆ ಮೂಲ್ಕಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದಾಗ, ಕಿಲ್ಪಾಡಿ ಗ್ರಾಮ ಕೆಲ ಕಾಲ ಮಹಾನಗರ ಪಾಲಿಕೆಯ 1ನೇ ವಾರ್ಡ್ನ ವ್ಯಾಪ್ತಿಯಲ್ಲಿತ್ತು. ಮೊದಲು ಬಳ್ಕುಂಜೆ ಮಂಡಲ ಪಂಚಾಯತ್ ವ್ಯಾಪ್ತಿಗೆ ಸೇರಿದ್ದ ಕಿಲ್ಪಾಡಿ ಗ್ರಾಮ ಅನಂತರ ಅತಿಕಾರಿಬೆಟ್ಟು, ಶಿಮಂತೂರು ಮತ್ತು ಕಿಲ್ಪಾಡಿ ಗ್ರಾಮಗಳು ಸೇರಿ ಕಿಲ್ಪಾಡಿ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಆಯಿತು. ಮತ್ತೆ ಪುನರ್ ವಿಂಗಡಣೆಯಾದಾಗ ಕಿಲ್ಪಾಡಿ ಗ್ರಾಮವೊಂದೇ ಕಿಲ್ಪಾಡಿ ಗ್ರಾಮ ಪಂಚಾಯತ್ ಆಗಿ ಈಗ ಕಾರ್ಯನಿರ್ವಹಿಸುತ್ತಿದೆ.
ಮೂಲ್ಕಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ಅತಿಕಾರಿಬೆಟ್ಟು ಗ್ರಾ. ಪಂ. ಮತ್ತು ಬೆಳ್ಳಾಯಾರು ಗ್ರಾ.ಪಂ. ವ್ಯಾಪ್ತಿಯ ಉದ್ದಕ್ಕೂ, ಅದರಲ್ಲೂ ರಾಜ್ಯ ಹೆದ್ದಾರಿಯ ಆಸುಪಾಸಿನಲ್ಲಿ ಹರಡಿದ್ದರೂ ಆದಾಯ ಮಾತ್ರ ಅತ್ಯಂತ ಕಡಿಮೆಯಾಗಿದೆ. ಕಾರಣ ಇಲ್ಲಿಯ ರಾಜ್ಯ ಹೆದ್ದಾರಿಯ ರಸ್ತೆಯ ಉದ್ದಕ್ಕೂ ಇರುವ ಪ್ರದೇಶವನ್ನು ಕೃಷಿ ವಲಯವಾಗಿ ಗುರುತಿಸಿರುವ ಕಾರಣ ಯಾವುದೇ ವಾಣಿಜ್ಯ ಕಟ್ಟಡಗಳು ತಲೆ ಎತ್ತುವುದು ಕಷ್ಟವಾಗಿದೆ. ಕೊಂಕಣ ರೈಲು ಮಾರ್ಗ ಕೂಡ ಈ ಗ್ರಾಮವನ್ನು ಸೀಳಿಕೊಂಡು ಹೋಗಿದೆ. ಗ್ರಾಮದ ಹಲವು ಎಕರೆ ಕೃಷಿ ಪ್ರದೇಶ ಹಡಿಲು ಬಿದ್ದಿದ್ದು, ಇಲ್ಲಿ ಕೃಷಿ ನಡೆಸುವುದಕ್ಕೆ ಪ್ರೋತ್ಸಾಹ ಸಿಗಬೇಕಿದೆ. ಗ್ರಾಮಕ್ಕೆ ಒಂದು ಸಾರ್ವಜನಿಕ ಶ್ಮಶಾನ ಇಲ್ಲ ಎಂಬ ಕೊರತೆ ಬಹಳ ಹಿಂದಿನಿಂದಲೇ ಇದೆ.
ಗ್ರಾಮ ವ್ಯಾಪ್ತಿಯ ಕೃಷಿ ವಲಯವನ್ನು ಬದಲಾಯಿಸುವ ಪ್ರಕ್ರಿಯೆ ಆದಷ್ಟು ಶೀಘ್ರದಲ್ಲಿ ನಡೆಸುವಂತೆ ಪಂಚಾಯತ್ನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಸರಕಾರ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡುತ್ತಿದೆ. ಆದರೆ ಈ ಪಂಚಾಯತ್ ಸ್ವಂತ ಕಟ್ಟಡ ಇಲ್ಲದೆ ಒದ್ದಾಡುತ್ತಿದ್ದು, ತ್ಯಾಜ್ಯ ನಿರ್ವಹಣೆಗೆ ಘಟಕ ಸ್ಥಾಪಿಸಲು ಅಸಾಧ್ಯ ಎಂಬ ಸ್ಥಿತಿಯಲ್ಲಿದೆ.
ಕಿಲ್ಪಾಡಿ ಗ್ರಾಮ ಪಂಚಾಯತ್ ಮಂಗಳೂರು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿದ್ದು ಇಲ್ಲಿಯ ಪ್ರತಿಯೊಂದು ಕೆಲಸಕ್ಕೂ ಜನ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ವನ್ನು ಅವಲಂಬಿಸಬೇಕಾಗಿದೆ. ಜತೆಗೆ ಕಿಲ್ಪಾಡಿ ಪಂಚಾಯತ್ನ ಬೆಳವಣಿಗೆಗೆ ಯಾವ ಅನುದಾನವೂ ಸಿಕ್ಕಿರುವ ದಾಖಲೆ ಈ ತನಕ ಇಲ್ಲ ಎಂದು ಪಂಚಾಯತ್ ಆಡಳಿತ ಹೇಳುತ್ತದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಗ್ರಾಮಕ್ಕೆ ಸಂಬಂಧಿಸದವರಿಗೆ ಮನೆ ನಿವೇಶನ ಕೊಟ್ಟು ಅವರನ್ನು ತಮ್ಮ ಗ್ರಾಮ ಪ್ರಜೆಗಳಾಗಿ ಸೇರಿಸಿರುವ ಕಿಲ್ಪಾಡಿ ಪಂಚಾಯತ್ ಈ ತನಕವೂ ತನ್ನ ಕಚೇರಿಗಾಗಿ ಸ್ವಂತ ಜಾಗವಿಲ್ಲದೆ ಈಗಲೂ ಲೋಕೋಪಯೋಗಿ ಇಲಾಖೆಯ ಹಂಗಿನಲ್ಲಿ ತನ್ನ ಕಚೇರಿಯನ್ನು ನಡೆಸುತ್ತಿದೆ.
ಕೃತಕ ನೆರೆಯ ಬಾಧೆ
ಬಾಚಿಕಟ್ಟ ರಸ್ತೆ ಕಳೆದ ಹಲವು ವರ್ಷಗಳ ಹಿಂದೆ ಮಾಡ ಲಾಗಿದ್ದರೂ ಈಗಲೂ ಮಣ್ಣಿನ ರಸ್ತೆ ಯಾಗಿಯೇ ಉಳಿದಿದೆ. ಶಿಮಂತೂರಿನಿಂದ ಆರಂಭವಾಗಿ ಕುಮಾರ ಮಂಗಿಲ ದೇಗುಲದ ಬಳಿಯಿಂದ ಮಾನಂಪಾಡಿ ಸೇತುವೆವರೆಗಿನ ಸಣ್ಣ ನದಿಯ ಹೂಳು ತೆಗೆಯ ದಿರುವುದರಿಂದ ಇಲ್ಲಿ ಒಂದು ಸಣ್ಣ ಮಳೆ ಬಂದರೂ ಕೃತಕ ನೆರೆಯ ಬಾಧೆ ತಪ್ಪಿದಲ್ಲ. ಈ ಗ್ರಾಮದ ಪರಿ ಮಿತಿಯಲ್ಲಿ ರಾಜ್ಯ ಹೆದ್ದಾರಿಯ ಬಳಿ ಇರುವ ಕೆಂಚನಕೆರೆಯ ಕೆರೆ ಪ್ರದೇಶದ ಎಲ್ಲ ಮನೆಗಳಿಗೆ ನೀರಿನ ಆಶ್ರಯವನ್ನು ವರ್ಷವಿಡೀ ಕೊಡುವ ಸಮೃದ್ಧ ಕೆರೆಯಾಗಿದೆ. ಇದರ ಅಭಿವೃದ್ಧಿ ಅಗತ್ಯವಾಗಿ ಆಗಬೇಕಾಗಿದೆ.
ಇಕ್ಕಟ್ಟಾಗಿರುವ ರಸ್ತೆಗಳು
ಗ್ರಾ.ಪಂ. ವ್ಯಾಪ್ತಿಯ ಹಲವಾರು ಒಳ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಆದರೆ ಅವು ತೀರಾ ಇಕ್ಕಟ್ಟಾಗಿವೆ. ಕಾಂಕ್ರೀಟ್ ಹಾಕುವಾಗ ಹಳೆಯ ರಸ್ತೆ ಇದ್ದಷ್ಟು ಅಗಲಕ್ಕೆ ಹಾಕದೆ, ಆಚೀಚೆ ಜಾಗ ಬಿಟ್ಟು ಸಪೂರಕ್ಕೆ ಹಾಕಲಾಗಿದೆ. ಮುಖ್ಯವಾಗಿ ಗೇರುಕಟ್ಟೆ ಬಳಿಯಿಂದ ಕೋರªಬ್ಬು ದೈವಸ್ಥಾನಕ್ಕೆ ಹೋಗುವ ರಸ್ತೆ ಕಾಂಕ್ರೀಟ್ ಆಗಿದ್ದರೂ ಎರಡು ವಾಹನಗಳು ಈ ರಸ್ತೆಯಲ್ಲಿ ಎದುರು ಬದುರಾಗಿ ಬಂದಲ್ಲಿ ದೇವರೇ ಗತಿ. ಈ ರಸ್ತೆಯ ಚರಂಡಿ ಬದಿ ಗಟ್ಟಿ ಮಾಡಿ ಉಳಿದ ಜಾಗಕ್ಕೆ ಕಾಂಕ್ರೀಟ್ ಹಾಕಿದರೆ ಇವೆಲ್ಲದಕ್ಕೂ ಪರಿಹಾರ ಸಿಗಬಹುದು.
ಗ್ರಾಮ ವಿಶೇಷ
ಈ ಗ್ರಾಮದಲ್ಲಿ ವಾಯು ಸೇನೆಯ ಹಿರಿಯ ಅಧಿಕಾರಿಯಾಗಿದ್ದ 1971ರ ಪಾಕಿಸ್ಥಾನ -ಭಾರತ ಯುದ್ಧದಲ್ಲಿ ಹೋರಾಡಿ ರಾಷ್ಟ್ರಪತಿಗಳ ಪದಕ ಪಡೆದ ಗ್ರೂಪ್ ಕ್ಯಾ| ದಿನೇಶ್ಚಂದ್ರ ಭಂಡಾರಿಯವರು ಕಿಲ್ಪಾಡಿ ಗ್ರಾಮದವರು. ಅವರ ಅನಂತರ ಗ್ರಾಮದ ಕೆಲವು ಯುವಕರು ಸೇನೆಗೆ ಸೇರಿ ಸೇವೆ ಸಲ್ಲಿಸಿದ್ದಾರೆ.
ಯೋಗ ಕೇಂದ್ರ
ಕಿಲ್ಪಾಡಿ ಗ್ರಾಮದ ಜಯ ಮುದ್ದು ಶೆಟ್ಟಿ ಅವರು ಪರಿಸರದ ಸುಮಾರು 150 ಜನರಿಗೆ ಜಾತಿ ಮತಗಳ ಅಂತರ ಇಲ್ಲದೆ 10 ವರ್ಷಗಳಿಂದ ನಿತ್ಯವೂ ತನ್ನ ಮನೆಯಂಗಳದಲ್ಲಿ ಉಚಿತವಾಗಿ ಯೋಗ ತರಬೇತಿಯನ್ನು ನೀಡುತ್ತಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಕೃಷಿ ವಲಯದ ಪರಿವರ್ತನೆ ಅಗತ್ಯ: ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಾರ್ನಾಡು-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಕೆರೆಕಾಡು ತಿರುವುವವರೆಗೆ ರಸ್ತೆಯ ಎರಡು ಬದಿಯಲ್ಲಿ ಹರಡಿಕೊಂಡಿದ್ದರೂ ಈ ಪ್ರದೇಶ ಕೃಷಿ ವಲಯ ಎಂದು ಗುರುತು ಮಾಡಿರುವುದು ಇಲ್ಲಿಯ ಪಂಚಾಯತ್ಗೆ ಆದಾಯ ಬರುವ ಬಹುತೇಕ ವ್ಯವಹಾರ-ವಾಣಿಜ್ಯ ಕೇಂದ್ರಗಳ ಸ್ಥಾಪನೆಗೆ ತೊಂದರೆಯಾಗಿದೆ. ಆದುದರಿಂದ ಕೃಷಿ ವಲಯದ ಪರಿವರ್ತನೆ ಅತೀ ಅಗತ್ಯ ಹಾಗೂ ಶೀಘ್ರ ಆಗಬೇಕಾಗಿದೆ. –ಲೀಲಾವತಿ, ಅಧ್ಯಕ್ಷರು, ಕಿಲ್ಪಾಡಿ ಗ್ರಾ.ಪಂ.
ಸವಲತ್ತು ಒದಗಿಸಿ: ರಸ್ತೆ ಮತ್ತು ನೀರಿನ ಸವಲತ್ತುಗಳನ್ನು ವಿಸ್ತಾರಗೊಳಿಸಿದಲ್ಲಿ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಒಳ್ಳೆಯದಾದೀತು. ಅವಕಾಶ ಇದ್ದಲ್ಲಿ ವಾಣಿಜ್ಯ ಕಟ್ಟಡಗಳು ಬೆಳೆದರೆ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಪೂರಕವಾಗಬಹುದು. –ಭಾಸ್ಕರ ಶೆಟ್ಟಿಗಾರ, ಗ್ರಾಮಸ್ಥರು
-ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು