ಮಂಗಳೂರು- ಮುಂಬಯಿ ವಿಮಾನ ಯಾನ ಸಂಖ್ಯೆಯಲ್ಲಿ ಇಳಿಕೆ
ಉಭಯ ಜಿಲ್ಲೆಗಳ ಪ್ರಯಾಣಿಕರಿಗೆ ದುಪಟ್ಟು ದರದ ಪೆಟ್ಟು
Team Udayavani, Oct 28, 2019, 9:35 PM IST
ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಯಾನಿಗಳ ಸಂಖ್ಯೆ ವರ್ಷದಿಂದ ವರ್ಷ ಹೆಚ್ಚಳವಾಗುತ್ತಿದೆ. ಬಸ್, ರೈಲು ಯಾನದ ಬದಲು ವಿಮಾನಯಾನಕ್ಕೆ ಹೆಚ್ಚಿನ ಒಲವು ತೋರಿಸುವುದು ಇದಕ್ಕೆ ಕಾರಣವಿರಬಹುದು. ಆದರೆ ಇದೀಗ ಯಾನ ಸಂಖ್ಯೆಯಲ್ಲಿ ಇಳಿತ ಮತ್ತು ದುಪ್ಪಟ್ಟು ದರದಿಂದಾಗಿ ವಿಮಾನದ ಮೂಲಕ ಪ್ರಯಾಣಿಸಲು ಯಾನಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಂಗಳೂರು ವಿಮಾನ ನಿಲ್ದಾಣದ ಪ್ರಗತಿಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ.
ಕಳೆದ ವರ್ಷ ಮಂಗಳೂರು -ಮುಂಬಯಿ ನಡುವೆ ಏರ್ ಇಂಡಿಯಾ ಸಂಸ್ಥೆಯ ಒಂದು, ಜೆಟ್ ಏರ್ವೆàಸ್ನ ಮೂರು, ಇಂಡಿಗೊ ಸಂಸ್ಥೆಯ ಎರಡು ಹಾಗೂ ಸ್ಪೈಸ್ ಜೆಟ್ನ ಒಂದು ಸಹಿತ ಒಟ್ಟು ಏಳು ಯಾನ ದಿನಂಪ್ರತಿ ಕೈಗೊಳ್ಳುತ್ತಿತ್ತು. ಆಗ 5ರಿಂದ 6 ಸಾವಿರ ರೂ. ದರ ವಿಧಿಸಲಾಗುತ್ತಿತ್ತು.
ಏಳರಿಂದ ಮೂರಕ್ಕೆ ಇಳಿಕೆ, ದರ ದುಪ್ಪಟ್ಟು
ಈಗ ಏರ್ ಇಂಡಿಯಾ ಸಂಸ್ಥೆಯು ಮುಂಬಯಿಗೆ ನೇರ ಯಾನವನ್ನು ಕೈಬಿಟ್ಟಿದೆ. ಬದಲಾಗಿ ವಯಾ ಕೊಯಮುತ್ತೂರು ಆಗಿ ಮುಂಬಯಿಗೆ ಯಾನ ಕೈಗೊಳ್ಳುತ್ತಿದೆ. ಇಂಡಿಗೊ ಸಂಸ್ಥೆಯ ಎರಡು ಮತ್ತು ಸ್ಪೈಸ್ ಜೆಟ್ನ ಒಂದು ವಿಮಾನ ಮುಂಬಯಿಗೆ ನೇರ ಯಾನ ಕೈಗೊಳ್ಳುತ್ತಿದೆ. ಇದರ ಜತೆ ದರದಲ್ಲಿ ಏರಿಕೆ ಮಾಡಿರುವುದು ಪ್ರಯಾಣಿಕರಿಗೆ ಆಘಾತವಾಗಿದೆ. ಸದ್ಯ 15 ಸಾವಿರದಿಂದ 16 ಸಾವಿರ ರೂ. ದರ ತಲುಪಿದೆ. ದುಪ್ಪಟ್ಟು ದರ ನೀಡಿದರೂ ಅಗತ್ಯವಿದ್ದ ಸಮಯದಲ್ಲಿ ಮುಂಬಯಿಗೆ ಪ್ರಯಾಣಿಸಲು ಸಾಕಷ್ಟು ವಿಮಾನಯಾನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆಯಿದೆ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಏರ್ ಇಂಡಿಯಾ ಸಂಸ್ಥೆ ಗಮನಿಸಲಿ
ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯು ಮುಂಬಯಿಗೆ ನೇರ ಯಾನ ಕೈಗೊಳ್ಳುವ ಬದಲು ವಯಾ ಕೊಯಮುತ್ತೂರು ಆಗಿ ಯಾನ ಮಾಡುತ್ತಿದೆ. ಇದರಿಂದ ಸಮಯವೂ ವ್ಯರ್ಥ ಮತ್ತು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ನೇರ ಯಾನದ ವೇಳೆ ಭರ್ತಿಯಾಗುತ್ತಿದ್ದ ವಿಮಾನದಲ್ಲಿ ಈಗ ಅರ್ಧದಷ್ಟೂ ಜನ ಇರುವುದಿಲ್ಲ.
ಮಂಗಳೂರು -ಮುಂಬಯಿ ನಡುವೆ ನೇರ ಯಾನ ಕೈಗೊಂಡರೆ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸಬಹುದು. ಆಗ ದರದಲ್ಲಿಯೂ ಕಡಿತವಾಗುವ ಸಾಧ್ಯತೆಯಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿಯಲ್ಲಿ ವಿಮಾನಯಾನ ಸಂಸ್ಥೆಯವರು ಕ್ರಮಕೈಗೊಳ್ಳಲಿ ಎಂಬುದು ಪ್ರಯಾಣಿಕರ ನಿರೀಕ್ಷೆಯಾಗಿದೆ.