‘ಸಾಮುದಾಯಿಕ ಶಕ್ತಿಯ ಸಾಕಾರಕ್ಕೆ ಸಂಘಟನೆ ಅಗತ್ಯ’
Team Udayavani, Aug 5, 2019, 5:50 AM IST
ಮಹಾನಗರ: ಸಮುದಾಯದ ಶಕ್ತಿಯ ಸಾಕಾರಕ್ಕೆ ಸಂಘಟನೆ ಅಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕುಲಾಲ-ಕುಂಬಾರರ ಯುವವೇದಿಕೆ ಸಂಘಟನಾತ್ಮಕವಾಗಿ ಬೆಳೆದು 10 ವರ್ಷಗಳಿಂದ ಸಾರ್ಥಕ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ್ ಆಳ್ವ ಹೇಳಿದರು.
ಕರ್ನಾಟಕ ರಾಜ್ಯ ಕುಲಾಲ-ಕುಂಬಾರರ ಯುವವೇದಿಕೆಯ ದಶಮಾನೋತ್ಸವ ಸಂಭ್ರಮವನ್ನು ನಗರದ ಕುದ್ಮುಲ್ ರಂಗರಾವ್ ಸ್ಮಾರಕ ಪುರಭವನದಲ್ಲಿ ರವಿವಾರ ಉದ್ಘಾಟಿಸಿ ಮಾತನಾಡಿದ ಅವರು ಕುಲಾಲ ಜನಾಂಗ ಸೃಜನಶೀಲರು ಮತ್ತು ಕರ್ಮಜೀವಿಗಳು. ಸಜ್ಜನರು, ಶಾಂತಿಪ್ರಿಯರು. ಸಾಂಸ್ಕೃತಿಕ ಹಿನ್ನೆಲೆಯವರು. ಮಣ್ಣಿನಿಂದ ನಿತ್ಯ ಉಪಯೋಗಿ ಮಡಕೆ, ಪರಿಕರಗಳು, ಕಲಾತ್ಮಕ ಕೃತಿಗಳನ್ನು ನಿರ್ಮಿಸಿ ಆ ಮೂಲಕ ಸಮಾಜಕ್ಕೆ ಮತ್ತು ಪರಿಸರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದವರು. ಅದಕ್ಕೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಆಗುತ್ತಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕುಂಬಾರಿಕೆಗೆ ಇನ್ನಷ್ಟು ವಿಸ್ತೃತ ವಾಣಿಜ್ಯ ಸ್ವರೂಪವನ್ನು ನೀಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಯುವ ವೇದಿಕೆ ಮುಂದಾಳುತ್ವವನ್ನು ವಹಿಸಬೇಕು. ಕುಲಾಲ-ಕುಂಬಾರ ಸಮುದಾಯದ ಬೃಹತ್ ಸಮಾವೇಶವನ್ನು ಆಯೋಜಿಸಬೇಕು. ಇದಕ್ಕೆ ಅವಶ್ಯವಿರುವ ಸಹಕಾರವನ್ನು ನೀಡಲು ಸಿದ್ಧ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್, ಕುಲಾಲ ಸಮುದಾಯದ ಬೇಡಿಕೆಗಳ ಬಗ್ಗೆ ಜಿಲ್ಲಾ ಎಲ್ಲ ಶಾಸಕರು, ಜನಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರ ಜತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ನಿಯೋಗ ತೆರಳಿ ಈಡೇರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಕುಲಾಲ-ಕುಂಬಾರ ಯುವವೇದಿಕೆಯ ಸ್ಥಾಪಕಾಧ್ಯಕ್ಷ, ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಹಸಂಚಾಲಕ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಪ್ರಸ್ತಾವನೆಗೈದು ಯುವವೇದಿಕೆ ನಡೆದು ಬಂದ ದಾರಿ, ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಸಮ್ಮಾನ
ಹಿರಿಯ ಯಕ್ಷಗಾನ ಕಲಾವಿದ ಬೇತಕುಂಞಿ, ಪ್ರಸಂಗ ರಚನೆಕಾರ ಶ್ರೀನಿವಾಸ ಸಾಲ್ಯಾನ್, ಶಾಸಕ ವೇದವ್ಯಾಸ ಕಾಮತ್, ಡಾ| ಅಣ್ಣಯ್ಯ ಕುಲಾಲ್ ಹಾಗೂ ಯಕ್ಷಗಾನ ಸಂಘಟಕ, ಪದ್ಯ ರಚನೆಕಾರ ಎಂ.ಕೆ. ರಮೇಶ್ ಆಚಾರ್ಯ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ದ.ಕ.ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಎಡಪದವು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಕೃಷ್ಣ ಅತ್ತಾವರ, ಸಮುದಾಯದ ಹಿರಿಯ ಮುಖಂಡ ಮಾಧವ ಕುಲಾಲ್ ಮುಖ್ಯ ಅತಿಥಿಗಳಾಗಿದ್ದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಚೌಡ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಯುವವೇದಿಕೆ ಅಧ್ಯಕ್ಷ ತೇಜಸ್ವಿ ರಾಜ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಸುಧಾಕರ ಕುಲಾಲ್, ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ದಶಮಾನೋತ್ಸವ ಅಂಗವಾಗಿ ದೇಶಭಕ್ತಿಯ ವಂದೇ ಮಾತರಂ ಯಕ್ಷಗಾನ ಜರಗಿತು.