ಕಳೆಗುಂದಿದ ಪಣಂಬೂರು ಬೀಚ್ ಸೌಂದರ್ಯ; ಭಾರೀ ಗಾಳಿ, ಮಳೆಗೆ ಕಡಲ್ಕೊರೆತ
Team Udayavani, Aug 4, 2022, 4:06 PM IST
ಪಣಂಬೂರು: ಅಂತಾರಾಷ್ಟ್ರೀಯ ಖ್ಯಾತಿಯ ಪಣಂಬೂರು ಬೀಚ್ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ. ಕಾರಣ ಕಳೆದ ಎರಡು ತಿಂಗಳುಗ ಳಿಂದ ಸುರಿಯುತ್ತಿರುವ ಭಾರೀ ಗಾಳಿ, ಮಳೆಗೆ ಬೀಚ್ ಕಡಲ್ಕೊರೆತಕ್ಕೆ ತುತ್ತಾಗಿ ಹೊಗೆ ರಾಶಿ ಸಮುದ್ರದ ಒಡಲು ಸೇರಿದರೆ, ಇತ್ತ ಬೀಚ್ ವೃತ್ತದ ಮೆಟ್ಟಿಲುಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ.
ಇಲ್ಲಿದ್ದ ವೀಕ್ಷಣಾ ಗೋಪುರ ಗಾಳಿಯ ಹೊಡೆತಕ್ಕೆ ಸಿಲುಕಿ ಉರುಳಿ ಬಿದ್ದಿದೆ. ಬೀಚ್ ನ ಸೌಂದರ್ಯವನ್ನು ಹೆಚ್ಚಿಸುತ್ತಿದ್ದ ಹಾಗೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ನೆರಳು ನೀಡುತ್ತಿದ್ದ ಬೃಹತ್ ತೆಂಗಿನ ಮರಗಳಲ್ಲಿ ನಾಲ್ಕೈದು ಈಗಾಗಲೇ ಉರುಳಿ ಬಿದ್ದು ಭೂಗತವಾಗಿವೆ. ತೀರದಲ್ಲಿ ನೆಟ್ಟಿರುವ ಸಸಿಗಳು ಸಮುದ್ರ ಪಾಲಾಗಿವೆ.
ಸಮುದ್ರ ಸೇರಿದ ಕಸ ಕಡ್ಡಿ, ಅಳಿದುಳಿದ ತ್ಯಾಜ್ಯ ರಾಶಿ ದಡದಲ್ಲಿ ಸಂಗ್ರಹವಾಗಿದೆ. ಸಮುದ್ರದ ಅಬ್ಬರದಿಂದಾಗಿ ಇದೀಗ ದಡಕ್ಕೂ ಕಾಲಿಡಲಾಗದೆ ದೂರದಲ್ಲೇ ನಿಂತು ಸಮುದ್ರ ವೀಕ್ಷಿಸುವ ಪರಿಸ್ಥಿತಿ ಬಂದೊ ದಗಿದೆ. ಹಲ ವಾರು ವರ್ಷಗಳ ಬಳಿಕ ಪಣಂಬೂರು ಬೀಚ್ ಇಷ್ಟು ದೊಡ್ಡ ಪ್ರಮಾ ಣದಲ್ಲಿ ಹಾಳಾಗಿದೆ.
ವ್ಯಾಪಾರಿ ಮಳಿಗೆಗಳ ಸ್ಥಳಾಂತರ
ಇಲ್ಲಿನ ಬೀಚ್ನಲ್ಲಿ ಹಲವಾರು ವ್ಯಾಪಾರ, ಆಹಾರ ಮಳಿಗೆಗಳಿದ್ದು ಭಾರೀ ಮಳೆ, ಕಡಲ್ಕೊರೆತಕ್ಕೆ ಸ್ಥಳಾಂತರ ಮಾಡಲಾಗಿದೆ. ತೆರೆಗಳು ರುದ್ರನರ್ತನಕ್ಕೆ ಸಮುದ್ರದ ಬದಿಯ ಉದ್ದಕ್ಕೂ ಆಳವಾದ ಹೊಂಡ ನಿರ್ಮಾಣವಾಗಿದೆ. ಇನ್ನು ಕೆಲವೇ ಮೀಟರ್ ದೂರದಲ್ಲಿ ಮೀನಕಳಿಯ ಬಳಿ ಕಡಲ್ಕೊರೆತ ಉಂಟಾಗಿರುವುದರ ಪರಿಣಾಮ ಪಣಂಬೂರು ಬೀಚ್ಗೂ ಆಗಿದೆ ಎಂಬುದು ಪರಿಣಿತರ ಅಭಿಪ್ರಾಯ. ಮೀನಕಳಿಯ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಕುಸಿದಿದೆ ಮಾತ್ರವಲ್ಲ, ದಡದ ಸಮೀಪದವಿದ್ದ ಮೂರ್ನಾಲ್ಕು ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ವೀಕ್ಷಣಾ ಗೋಪುರ ದುರಸ್ತಿಗೊಳ್ಳಬೇಕಿದೆ
ಮಳೆಗಾಲದ ಬಳಿಕ ನೈಸರ್ಗಿಕವಾಗಿ ಮರಳು ದಡದ ಮೇಲೆ ಬಿದ್ದು ಸರಿಯಾಗಬಹುದಾದರೂ ಇಲ್ಲಿನ ವೀಕ್ಷಣಾ ಗೋಪುರ, ಗುತ್ತು ಮನೆಯನ್ನು ದುರಸ್ತಿ ಪಡಿಸಲು ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಭಿವೃದಿಗೆ ಕ್ರಮ: ಕಳೆದ ಚಂಡಮಾರುತ ಸಮಯದಲ್ಲೂ ಬೀಚ್ನ ಬಹುತೇಕ ಭಾಗ ಹಾನಿಗೊಳಗಾಗಿತ್ತು. ಈ ಬಾರಿಯು ಸಮಸ್ಯೆಯಾಗಿದೆ. ಬೀಚ್ ನಿರ್ವಹಣೆಗೆ ಇದೀಗ ಇ ಟೆಂಡರ್ ಆಹ್ವಾನಿಸಲಾಗಿದ್ದು, ಆ. 18ರ ವರೆಗೆ ಸಲ್ಲಿಸಲು ಅವಕಾಶವಿದೆ. ಬೀಚ್ನಲ್ಲಿ ಅಭಿವೃದ್ಧಿಗೆ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಲಿದೆ. – ಮಾಣಿಕ್ಯ, ಪ್ರವಾಸೋದ್ಯಮ ಉಪನಿರ್ದೇಶಕರು, ಮಂಗಳೂರು