ಎತ್ತಿನ ಗಾಡಿಯಲ್ಲಿ ಪ್ಲಾಸ್ಟಿಕ್ ರಾಕ್ಷಸನನ್ನು ಎಳೆದೊಯ್ದ ಯಮಧರ್ಮರಾಯ, ಚಿತ್ರಗುಪ್ತ!
ಪೆರ್ಮುದೆ ಗ್ರಾ.ಪಂ.: ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾ
Team Udayavani, Jul 24, 2022, 11:32 AM IST
ಬಜಪೆ: ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎತ್ತಿನ ಗಾಡಿಯ ಮೂಲಕ ಏರ್ಪಡಿಸಿರುವ ವಿಶೇಷ ಜಾಥಾ ಜನರನ್ನು ಸೆಳೆಯುವಂತೆ ಮಾಡಿದೆ.
ಪ್ಲಾಸ್ಟಿಕ್ ರಾಕ್ಷಸ, ಯಮಧರ್ಮ ರಾಯ, ಚಿತ್ರಗುಪ್ತ ಎತ್ತಿನ ಗಾಡಿಯಲ್ಲಿ ಊರಿನ ಪೇಟೆ ರಸ್ತೆಯಲ್ಲಿ ತಿರುಗಾಟ ನಡೆಸಿದ್ದಾರೆ.
ಯಮಧರ್ಮರಾಯನು ಚಿತ್ರ ಗುಪ್ತನಲ್ಲಿ ಭೂಮಿಯಲ್ಲಿ ಜನರ ಪರಿಸ್ಥಿತಿ ಹೇಗಿದೆ ಎಂದು ಕೇಳುತ್ತಾನೆ; ಅದಕ್ಕೆ ಉತ್ತರವಾಗಿ ಚಿತ್ರಗುಪ್ತ ಎಲ್ಲವೂ ಸರಿಯಾಗಿದೆ. ಆದರೆ ಜನರು ಅವರವರ ಬುದ್ಧಿಯನ್ನು ಉಪಯೋಗಿಸದೇ ಕಸವನ್ನು ಅಲ್ಲಲ್ಲಿ ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್ ರಾಕ್ಷಸ ಜನರಿಗೆ ತೊಂದರೆ ಕೊಡುತ್ತಿದ್ದಾನೆ. ಭೂಮಿ ಬರಡಾಗುತ್ತಾ ಇದೆ. ಜಲಮೂಲಗಳು ಕಲು ಷಿತವಾಗುತ್ತಿದೆ, ನೀರು ಬತ್ತಿ ಹೋಗುತ್ತಾ ಇದೆ ಎಂದು ಹೇಳುತ್ತಾನೆ.
ಹೌದು, ಅದಕ್ಕೆ ಜನರು ಏನೂ ಪರಿಹಾರ ವ್ಯವಸ್ಥೆ ಮಾಡಿಲ್ಲವೇ ಎಂದು ಯಮ ಧರ್ಮರಾಯ ಕೇಳುತ್ತಾನೆ.
ಈಗಾಗಲೇ ಸ್ವಚ್ಛ ಭಾರತ ಮಿಶನ್ ಇದೆ. ಪ್ರತಿ ಗ್ರಾ.ಪಂ., ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಘಟಕ ನಿರ್ಮಿಸಿ, ಒಣ ಕಸ ಸಂಗ್ರಹ ಮಾಡುತ್ತಾ ಇದ್ದಾರೆ. ಇದಕ್ಕಾಗಿ ಪಂಚಾಯತ್ನಿಂದ ಜನವಸತಿ ಪ್ರದೇಶಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇದಕ್ಕೆ ಸರಕಾರದಿಂದ ಪ್ರಯತ್ನ ಆಗುತ್ತಿದೆ ಎಂದು ಚಿತ್ರಗುಪ್ತ ಹೇಳುತ್ತಾನೆ.
ಅದರೂ ಕಡಿಮೆಯಾಗಲಿಲ್ಲವೇ ಎಂದು ಯಮಧರ್ಮರಾಯ ಕೇಳುತ್ತಾನೆ. ಒಂದು ಹಂತಕ್ಕೆ ಬಂದಿದೆ ಆದರೂ ಇನ್ನೂ ಕಡಿಮೆಯಾಗಲು ತುಂಬಾ ಇದೆ ಎಂದು ಚಿತ್ರಗುಪ್ತ ಹೇಳುತ್ತಾನೆ. ಹಾಗಾದರೆ ನಾನೇನು ಭೂಮಿಗೆ ಇಳಿದು ಬರಬೇಕಾ ಎಂದು ಯಮಧರ್ಮರಾಯನು ಕೇಳುತ್ತಾನೆ. ಅದಕ್ಕೆ ಹೌದು, ಹೇಗಾದರೂ ಮಾಡಿ ಇದನ್ನು ಸರಿಪಡಿಸಬೇಕೆಂದು ಚಿತ್ರಗುಪ್ತ ಕೇಳಿಕೊಳ್ಳುತ್ತಾನೆ.
ಅದಕ್ಕೆ ಯಮಧರ್ಮರಾಯ ಭೂಮಿಗೆ ಇಳಿದು ಪ್ಲಾಸ್ಟಿಕ್ ರಾಕ್ಷಸನನ್ನು ಯಮ ಪಾಶದಲ್ಲಿ ಎಳೆದುಕೊಂಡು ಹೋಗುತ್ತಾನೆ.
ಪೆರ್ಮುದೆ ಗ್ರಾ.ಪಂ., ಸಾಹಸ್ ಸಂಸ್ಥೆ ಹಾಗೂ ಎಚ್ಸಿಎಲ್ ಸಂಸ್ಥೆಯ ಸಹಯೋಗದಲ್ಲಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾರದಾ ಯಕ್ಷಗಾನ ಭಜನ ಮಂಡಳಿಯಲ್ಲಿ ಕಿರು ನಾಟಕ ಪ್ರದರ್ಶನ ನಡೆಯಿತು. ಪ್ಲಾಸ್ಟಿಕ್ ಬಳಿಕೆಯ ದುಷ್ಪರಿಣಾಮಗಳ ಕುರಿತು ಸಾಹಸ್ ಸಂಸ್ಥೆಯ ಪ್ರತಿನಿಧಿಗಳು ಮಾಹಿತಿಯನ್ನು ನೀಡಿದರು.
ಪಂಚಾಯತ್ ಸದಸ್ಯರಾದ ಸಂದೇಶ್, ಸಾದಿಕ್, ಸರೋಜಾ, ಪಿಡಿಒ ಶೈಲಜಾ, ಕಾರ್ಯದರ್ಶಿವ ನಾಗೇಶ್, ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶೇಖರ್ ಶೆಟ್ಟಿ, ಗ್ರಾಮಸ್ಥರು ಉಪಸ್ಥಿತರಿದ್ದರು.