ವೃತ್ತದಲ್ಲಿದ್ದ ಸಿಗ್ನಲ್ ಸೋಲಾರ್ ಪ್ಯಾನಲ್ ರಾತ್ರಿಯೇ ರಿಪೇರಿ
ಉದಯವಾಣಿ ಓದುಗರ ದೂರಿಗೆ ತುರ್ತು ಸ್ಪಂದಿಸಿದ ಪೊಲೀಸ್ ಆಯುಕ್ತರು
Team Udayavani, Jun 27, 2019, 5:00 AM IST
ಮಹಾನಗರ: ನಗರದ ಅಂಬೇಡ್ಕರ್ ವೃತ್ತದ ಟ್ರಾಫಿಕ್ ಸಿಗ್ನಲ್ಗೆ ಅಳವಡಿಸಿದ್ದ ಸೋಲಾರ್ ಪ್ಯಾನಲ್ ಕಿತ್ತು ನೇತಾಡುತ್ತಿರುವುದನ್ನು ಗಮನಕ್ಕೆ ಬಂದ ಕೂಡಲೇ ಅಂದರೆ ರಾತ್ರಿ ಹೊತ್ತಿನಲ್ಲಿಯೇ ಅದನ್ನು ರಿಪೇರಿಗೊಳಿಸುವ ಮೂಲಕ ಸಾರ್ವಜನಿಕರ ದೂರಿಗೆ ತುರ್ತು ಸ್ಪಂದಿಸುವ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಡಿದ್ದಾರೆ.
ನಗರದಲ್ಲಿ ಅತಿ ಹೆಚ್ಚು ಜನರು ಹಾಗೂ ವಾಹನಗಳು ಓಡಾಡುತ್ತಿರುವ ಜಾಗ ಜ್ಯೋತಿ ಜಂಕ್ಷನ್ನ ಅಂಬೇಡ್ಕರ್ ವೃತ್ತ. ಆದರೆ, ಇಲ್ಲಿನ ಟ್ರಾಫಿಕ್ ಸಿಗ್ನಲ್ಗೆ ಅಳವಡಿಸಿದ್ದ ಸೋಲಾರ್ ಪ್ಯಾನಲ್ ಸಂಪರ್ಕ ಕಡಿದು ನೇತಾಡುತ್ತ ಅಪಾಯ ಸೂಚಿಸುತ್ತಿತ್ತು. ಉದಯವಾಣಿಯ ಓದುಗರೊಬ್ಬರು ಫೋಟೊ ತೆಗೆದು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯುವಂತೆ ವಾಟ್ಸಪ್ಗೆ ಮಂಗಳವಾರ ಸಂಜೆ ಸಂದೇಶ ಕಳುಹಿಸಿದ್ದರು.
ಆದರೆ, ಪತ್ರಿಕೆಯಲ್ಲಿ ಪ್ರಕಟಿಸುವ ಬದಲು ಈ ಸಮಸ್ಯೆಯನ್ನು ನೇರವಾಗಿ ಸಂಬಂಧಪಟ್ಟವರ ಗಮನಕ್ಕೆ ತಂದರೆ ಅದಕ್ಕೆ ಕೂಡಲೇ ಪರಿಹಾರ ಸಿಗಬಹುದು ಎಂಬ ಆಶಯದೊಂದಿಗೆ ಓದುಗರು ಕಳುಹಿಸಿದ್ದ ಆ ವಿವರ ಹಾಗೂ ಚಿತ್ರವನ್ನು ಅದೇ ದಿನ ರಾತ್ರಿ ಸುಮಾರು 9 ಗಂಟೆಗೆ ನಗರ ಪೊಲೀಸ್ ಆಯುಕ್ತ ಸಂದೀಪ್ ಅವರಿಗೆ ವಾಟ್ಸಪ್ ಮಾಡಲಾಗಿತ್ತು.
ವಿಶೇಷ ಅಂದರೆ, ಆಯುಕ್ತರು ತತ್ಕ್ಷಣವೇ ಅದನ್ನು ಟ್ರಾಫಿಕ್ ಎಸಿಪಿಗೆ ರವಾನಿಸಿದ್ದು, ಅವರು ಸ್ಪಂದಿಸುತ್ತಾರೆ ಎಂದು ಉತ್ತರಿಸಿದರು.