ಕದ್ರಿ ದೇಗುಲ ಅಂಗಣದಲ್ಲಿ ಸಂಶಯಾಸ್ಪದವಾಗಿ ಸಂಚಾರ: ಮೂವರು ವಶಕ್ಕೆ
Team Udayavani, May 12, 2023, 1:17 PM IST
ಮಂಗಳೂರು: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅಂಗಣಕ್ಕೆ ಗುರುವಾರ ರಾತ್ರಿ ಬೈಕ್ ನಲ್ಲಿ ಬಂದುದಲ್ಲದೆ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಅನ್ಯ ಕೋಮಿನ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್ (19 ವ), ಉಮ್ಮರ್ ಫಾರೂಕ್ (21 ವ), ಮಹಮ್ಮದ್ ಜಾಫರ್ (18 ವ) ಎಂಬವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಪರಿಚಿತರ ಸಂಚಾರದ ಮಾಹಿತಿ ಪಡೆದ ಸ್ಥಳೀಯರು ದೇವಸ್ಥಾನಕ್ಕೆ ಧಾವಿಸಿ ಅವರನ್ನು ವಿಚಾರಿಸಿದ್ದು, ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿಯ ಮನ್ ಕಿ ಬಾತ್ ಕಾರ್ಯಕ್ರಮ ಕೇಳದ 36 ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷೆ!
ವಿಚಾರಣೆ ಸಂದರ್ಭ ಯುವಕರು ತಾವು ಅಸೈಗೋಳಿ ಯಿಂದ ಕಾಟಿಪಳ್ಳಕ್ಕೆ ಹೋಗುವವರಾಗಿದ್ದು, ಗೂಗಲ್ ಮ್ಯಾಪ್ ನೋಡಿಕೊಂಡು ಹೋಗುವಾಗ ದಾರಿ ತಪ್ಪಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ದೇವಸ್ಥಾನದ ಅಂಗಣಕ್ಕೆ ಬೈಕ್ ತಂದಿರುವುದಲ್ಲದೆ ಚಪ್ಪಲಿ ಧರಿಸಿ ಅಡ್ಡಾಡುತ್ತಿದ್ದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಂದಿರುವ ಉದ್ದೇಶವನ್ನು ಸ್ಪಷ್ಟಪಡಿಸುವಂತೆ ತಿಳಿಸಿದರು.
ಅವರಿಂದ ಸೂಕ್ತ ಉತ್ತರ ಬಾರದಿದ್ದಾಗ ಪೊಲೀಸರಿಗೆ ಒಪ್ಪಿಸಿದ್ದು, ಹೊಯ್ಸಳ ವಾಹನದ ಮೂಲಕ ಅವರನ್ನು ಕರೆದೊಯ್ಯುತ್ತಿರುವ ದೃಶ್ಯ ವೀಡಿಯೋದಲ್ಲಿದೆ.