ಅಗ್ನಿ ಪರೀಕ್ಷೆಯ ಕಾಲ: ಸಚಿವ ಖಾದರ್
Team Udayavani, Jun 10, 2018, 6:00 AM IST
ಮಂಗಳೂರು: ಪ್ರಸ್ತುತ ಜಿಲ್ಲೆಯಲ್ಲಿ ಕಾಂಗ್ರೆಸ್ನ ಸೋಲು ತಾತ್ಕಾಲಿಕ. ಕಾರ್ಯಕರ್ತರು ಶ್ರಮಿಸಿದರೆ ಪಕ್ಷ ಮತ್ತೆ ಗೆದ್ದೇ ಗೆಲ್ಲುತ್ತದೆ. ಮುಖಂಡರು ತನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ್ದು, ಅವರ ವಿಶ್ವಾಸ ವನ್ನು ಉಳಿಸಿಕೊಳ್ಳುವೆ ಎಂದು ನಗರಾಭಿವೃ ದ್ಧಿ, ವಸತಿ ಸಚಿವ ಯು.ಟಿ. ಖಾದರ್ ಹೇಳಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಖಾದರ್ ಅವರಿಗೆ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಈ ಭಾಗದ ಏಕೈಕ ಸಚಿವನಾದ ನನಗಿದು ಅಗ್ನಿಪರೀಕ್ಷೆಯ ಕಾಲ. ಹೆಚ್ಚಿನ ಹೊಣೆಗಾರಿಕೆ ಇದೆ. ಮಂಗಳೂರನ್ನು ಅಭಿವೃದ್ಧಿ ಪಡಿಸಲು ಮೇಯರ್ ಹಾಗೂ ಕಾರ್ಪೊರೇಟರ್ಗಳ ಜತೆ ಚರ್ಚಿಸಿ ಯೋಜನೆ ರೂಪಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೌಲಭ್ಯ ಗಳನ್ನು ಪಡೆಯಲು ಈಗಿರುವ ಆದಾಯ ಮಿತಿ ಹೆಚ್ಚಿಸಲು ಸಿಎಂ ಜತೆ ಚರ್ಚಿಸುವೆ ಎಂದರು.
ಗೆಲುವಿಗಾಗಿ ಆತ್ಮಾವಲೋಕನ
ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಮುಖಂಡರಾದ ಆಸ್ಕರ್, ವೀರಪ್ಪ ಮೊಲಿ, ಜನಾರ್ದನ ಪೂಜಾರಿ, ರಮಾನಾಥ ರೈ ಮೊದಲಾದವರ ಜತೆ ಚರ್ಚಿಸಬೇಕಿದೆ. ಸ್ಥಳೀಯ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರತಿ ವಾರ್ಡ್ಗಳಲ್ಲಿ ಪಕ್ಷದ ಗೆಲುವಿಗೆ ಮುಖಂಡರು ಆತ್ಮಾವಲೋಕನ ಮಾಡಬೇಕಿದೆ ಎಂದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಪಾದರಸದಂತೆ ಕೆಲಸ ಮಾಡು ವ ವ್ಯಕ್ತಿತ್ವವೇ ಖಾದರ್ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಪ್ರಾದೇಶಿಕ ಆಸ್ಪತ್ರೆಯಾಗಿ ವೆನಾಕ್ ನ ಮೇಲ್ದರ್ಜೆ, ಇಂದಿರಾ ಕ್ಯಾಂಟೀನ್ ಅನುಷ್ಠಾನದಲ್ಲಿ ಖಾದರ್ ಅವರ ಕೊಡುವೆ ಇದೆ ಎಂದರು. ಮೇಯರ್ ಭಾಸ್ಕರ್ ಕೆ, ಉಪ ಮೇಯರ್ ಮೊಹಮ್ಮದ್ ಕುಂಜತ್ತ ಬೈಲ್, ಪ್ರಮುಖರಾದ ಕೋಡಿಜಾಲ್ ಇಬ್ರಾಹಿಂ, ಮಮತಾ ಗಟ್ಟಿ, ನವೀನ್ ಡಿ’ಸೋಜಾ, ಯು.ಕೆ. ಮೋನು, ಕವಿತಾ ಸನಿಲ್, ಮೊಹಮ್ಮದ್ ಮೋನು, ಧನಂಜಯ ಅಡ³ಂಗಾಯ, ಸದಾಶಿವ ಉಳ್ಳಾಲ, ಪುರುಷೋತ್ತಮ ಚಿತ್ರಾಪುರ, ಶಾಹುಲ್ ಹಮೀದ್ ಉಪಸ್ಥಿತರಿದ್ದರು. ಜಿಲ್ಲಾ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸ್ವಾಗತಿಸಿ, ಎಂ. ಶಶಿಧರ್ ಹೆಗ್ಡೆ ವಂದಿಸಿದರು. ಸಂತೋಷ್ ಕುಮಾರ್ ನಿರ್ವಹಿಸಿದರು.
ಮಳೆಹಾನಿಗೆ ಸ್ಪಂದಿಸಿ
ಪ್ರಸ್ತುತ ಮಳೆ ಹಿನ್ನೆಲೆಯಲ್ಲಿ ಅನಾಹುತಗಳು ನಡೆದಾಗ ಕಾರ್ಯಕರ್ತರು ನಮ್ಮ ಶಾಸಕರಿಲ್ಲ ಎಂದು ಸುಮ್ಮನಿರದೆ, ಸಮಸ್ಯೆಗೆ ಸ್ಪಂದಿಬೇಕು. ಹೆಚ್ಚಿನ ನೆರವು ಬೇಕಿದ್ದರೆ ಮುಖಂಡರ ಗಮನ ತರಬೇಕು. ಆಗ ಜನ ಕಾಂಗ್ರೆಸ್ನ್ನು ಮರೆಯುವುದಿಲ್ಲ ಎಂದರು ಖಾದರ್.