ವಾಹನ ಸಂಚಾರಕ್ಕೆ ನೆರವಾಗಬೇಕಿದ್ದ ಕೋನ್ಗಳಿಂದಲೇ ಸಂಚಕಾರ!
Team Udayavani, Feb 10, 2022, 7:47 PM IST
ಮಹಾನಗರ: ಸುಗಮ ವಾಹನ ಸಂಚಾರಕ್ಕಾಗಿ ನಗರದ ವಿವಿಧ ಜಂಕ್ಷನ್ನಲ್ಲಿ ಅಳವಡಿಸಿರುವ ರಬ್ಬರ್ ಕೋನ್ಗಳು ಇದೀಗ ವಾಹನ ಸವಾರರಿಗೆ ಸಂಚಕಾರ ಸೃಷ್ಟಿಸುತ್ತಿದೆ!
ನಗರದ ವಿವಿಧ ಜಂಕ್ಷನ್ಗಳು, ಬಸ್ಬೇಗಳಲ್ಲಿ ಅಳವಡಿಸಲಾದ ಬಹುತೇಕ ರಬ್ಬರ್ ಕೋನ್ಗಳು ಈಗಾಗಲೇ ಕಿತ್ತು ಹೋಗಿವೆ. ಅದರಲ್ಲಿಯೂ ಬಂಟ್ಸ್ಹಾಸ್ಟೆಲ್, ಕರಂಗಲ್ಪಾಡಿ, ಕಲೆಕ್ಟರ್ ಗೇಟ್, ಕಂಕನಾಡಿ, ಹಂಪನಕಟ್ಟೆ ಸೇರಿದಂತೆ ಬಹುಭಾಗದಲ್ಲಿರುವ ರಬ್ಬರ್ ಕೋನ್ಗಳು ಕಿತ್ತು ಹೋಗಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಈ ಮಧ್ಯೆ, ಕೆಲವೊಂದು ಕಡೆಗಳಲ್ಲಿ ಇರುವ ರಬ್ಬರ್ ಕೋನ್ಗಳು ವಾಹನಗಳ ಚಕ್ರದೆಡೆಗೆ ಸಿಲುಕಿಕೊಳ್ಳುತ್ತಿವೆ. ಒಂದೆಡೆ ವಾಹನ ಸಂಚಾರಕ್ಕೆ ಇದು ಸಮಸ್ಯೆ ಆಗಿದ್ದರೆ, ಮತ್ತೂಂದೆಡೆ ಪಾದಚಾರಿಗಳಿಗೂ ಇದು ಮತ್ತಷ್ಟು ಕಿರಿಕಿರಿ.
ಕೇಸ್ ಕೂಡ ದಾಖಲಾಗಿತ್ತು!
ಕರಂಗಲ್ಪಾಡಿ ಜಂಕ್ಷನ್ ಬಳಿ ರಬ್ಬರ್ ಕೋನ್ಗಳ ಮೇಲೆ ಬಸ್ ಚಲಾಯಿಸಿ ಹಾನಿಗೊಳಿಸಿದ ಕಾರಣಕ್ಕೆ ಬಸ್ ಚಾಲಕನೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಜ್ಯೋತಿ ಚಿತ್ರಮಂದಿರ ಬಳಿಯೂ ಕೋನ್ಗಳಿಗೆ ಹಾನಿ ಎಸಗಿದ ಮೂವರು ಚಾಲಕರ ವಿರುದ್ಧ ಇದೇ ರೀತಿ ಕ್ರಮ ಜರಗಿಸಲಾಗಿತ್ತು.
ಅಪಾಯಕಾರಿ ಬೋಲ್ಟ್ಗಳು!
ಕೋನ್ಗಳು ತುಂಡಾಗಿ ಬಿದ್ದ ಕೆಲವೆಡೆ ಅದಕ್ಕೆ ಅಳವಡಿಸಿದ ಬೋಲ್ಟ್, ನಟ್ಗಳು ರಸ್ತೆಯಲ್ಲಿ ಹಾಗೆ ಇವೆ. ಅದರಲ್ಲಿಯೂ ಕರಂಗಲ್ಪಾಡಿ ತಿರುವು ಭಾಗ ಸಹಿತ ಕೆಲವು ಕಡೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೋಲ್ಟ್ ಇವೆ. ಇಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೂ ಸಮಸ್ಯೆ ಆಗುತ್ತಿದೆ. ಜತೆಗೆ ಕಂಕನಾಡಿ ಫಳ್ನೀರ್ನ ಹೈಲ್ಯಾಂಡ್ನಿಂದ ಫಳ್ನೀರ್ ಹೆಲ್ತ್ ಸೆಂಟರ್ವರೆಗಿನ ರಸ್ತೆಯಲ್ಲಿ ಇಂತಹ ಅಪಾಯಕಾರಿ ಬೋಲ್ಟ್ಗಳಿವೆ. ಕೊಂಚ ಗಮನ ತಪ್ಪಿದರೂ ದ್ವಿಚಕ್ರ ವಾಹನದವರ ಟಯರ್ಗೆ ಇದು ಹಾನಿ ಮಾಡುತ್ತಿದೆ.
ತೆರವು ಮಾಡಲು ಕ್ರಮ
ನಗರದ ವಿವಿಧ ಕಡೆಗಳಲ್ಲಿ ಅಳ ವಡಿಸಿರುವ ರಬ್ಬರ್ ಕೋನ್ಗಳು ಇದೀಗ ಮುರಿದು ಹೋಗಿವೆ. ಇದನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಕೋನ್ಗಳು ತುಂಡಾಗಿ ಅದಕ್ಕೆ ಅಳವಡಿಸಿದ ಬೋಲ್ಟ್, ನೆಟ್ಗಳು ರಸ್ತೆ ಯಲ್ಲಿ ಕಾಣುತ್ತಿವೆ. ಇದನ್ನು “ವೆಲ್ಡಿಂಗ್ ಮೆಷಿನ್’ ಸಹಾಯದಿಂದ ತೆರವು ಮಾಡ ಲಾಗುವುದು.
-ನಟರಾಜ್ ಎಂ.ಎ.
ಎಸಿಪಿ, ಸಂಚಾರ ವಿಭಾಗ
ಮಂಗಳೂರು ನಗರ ಪೊಲೀಸ್
-ದಿನೇಶ್ ಇರಾ