ಸತ್ಯ, ಧರ್ಮಾಧಾರಿತ ಜೀವನದಿಂದ ಉನ್ನತಿ: ಕನ್ಯಾಡಿ ಶ್ರೀ
Team Udayavani, Oct 9, 2017, 12:09 PM IST
ಮಂಗಳೂರು: ಸತ್ಯ ಮತ್ತು ಧರ್ಮ ಆಧಾರಿತವಾಗಿ ಜೀವನ ನಿರ್ವಹಿಸಿದಾಗ ಮನುಷ್ಯ ಉನ್ನತಿ ಕಾಣಲು ಸಾಧ್ಯ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಕನ್ಯಾಡಿಯ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಮಂಗಳೂರು ಆಶ್ರಯದಲ್ಲಿ ರವಿವಾರ ನಗರದ ಪುರಭವನದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಹಾಗೂ “ಸೀತಾರಾಮ ಕಲ್ಯಾಣೋತ್ಸವ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಧರ್ಮದ ಆಳಕ್ಕೆ ಹೋದಷ್ಟು ಹೊಸ ಹೊಸ ವಿಚಾರಗಳು ತಿಳಿಯುತ್ತವೆ. ಆದರೆ ನಾವೆಲ್ಲ ಪಲಾಯನವಾದಿಗಳು. ಧರ್ಮದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳದೆ ನಾವೇ ಶ್ರೇಷ್ಠ ಎಂದು ಹೇಳಿಕೊಳ್ಳುತ್ತೇವೆ. ನಾವು ಹೇಳುವವರಾಗಿದ್ದೇವೆಯೇ ಹೊರತು ಕೇಳುವ ಮನಸ್ಸು ನಮ್ಮದಾಗಿಲ್ಲ ಎಂಬುದು ನೋವಿನ ವಿಚಾರ ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೂ ಪರಂಪರೆಯಲ್ಲಿ ಗುರುಪೂಜೆ ಶ್ರೇಷ್ಠ. ಗುರುವಿನ ಆಶೀರ್ವಾದ ಇದ್ದರೆ ಮಾತ್ರ ಮುಕ್ತಿ ಸಿಗಲು ಸಾಧ್ಯ ಎಂದು ಹೇಳಿದರು.
ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಸಂಚಾಲಕ ಕೆ. ತೇಜೋಮಯ ಪೂಜಾರಿ ದಂಪತಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿ, ಗುರುವಂದನೆ ಸಲ್ಲಿಸಿದರು.ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟರ ಜಾಗತಿಕ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟ, ರಾಜ್ಯ ದೇವಾಡಿಗ ಸಮಾಜ ಅಧ್ಯಕ್ಷ ಡಾ| ದೇವರಾಜ್ ಕೆ., ಭಾರತೀಯ ತೀಯಾ ಸಮಾಜ ಅಧ್ಯಕ್ಷ ಸದಾಶಿವ ಉಳ್ಳಾಲ, ಮಾಜಿ ಶಾಸಕ ಎನ್. ಯೋಗೀಶ್ ಭಟ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ, ಅಖೀಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ಚಂದ್ರ ಡಿ. ಸುವರ್ಣ, ಹೊಟೇಲ್ ಉದ್ಯಮಿ ರಮೇಶ್ ಕುಮಾರ್, ಜಿಲ್ಲಾ ಕೊಟ್ಟಾರಿ ಸುಧಾರಕ ಸಂಘದ ಪುರುಷೋತ್ತಮ ಕೊಟ್ಟಾರಿ, ಕ್ಯಾ| ಬೃಜೇಶ್ ಚೌಟ, ಕಂಕನಾಡಿ ಬೈದರ್ಕಳ ಗರಡಿ ಕ್ಷೇತ್ರ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತರಿದ್ದರು.
ಬಳಿಕ ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಕಂಕನಾಡಿ ಯಿಂದ ಸ್ವಾಮೀಜಿ ಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.