ಬೆಳ್ತಂಗಡಿ: ಹಲ್ಲೆ ನಡೆಸಿ ಹಣ ಸಹಿತ ವಾಹನ ಕಳವು
Team Udayavani, Apr 3, 2023, 6:25 AM IST
ಬೆಳ್ತಂಗಡಿ: ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆ ಎಂಬಲ್ಲಿ ಮನೆ ಯಜಮಾನನಿಗೆ ಹಲ್ಲೆ ನಡೆಸಿ ಮೊಬೈಲ್ ಫೋನ್ನಿಂದ ಗೂಗಲ್ ಪೇ ಮೂಲಕ ಬಲತ್ಕಾರವಾಗಿ ಪಿನ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಲ್ಲದೆ ವಾಹನವನ್ನು ಕಳವು ಮಾಡಿದ ಘಟನೆ ಮಾ. 30ರಂದು ನಡೆದಿದೆ.
ಪಡಂಗಡಿ ಗ್ರಾಮದ ಪುತ್ಯೆಮನೆ ಜುವಾಮ್ ಗೋವಿಯಸ್ (64) ಅವರಿಗೆ ಹಲ್ಲೆ ನಡೆಸಿ ಪರಿಚಿತರಾದ ರಿಯಾಜ್ ಮತ್ತು ಫೈಝಲ್ ಹಣ ಎಗರಿಸಿದ ಆರೋಪಿತರು.
ಜುವಾಮ್ ಗೋವಿಯಸ್ ಅವರು ತನ್ನ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಪರಿಚಯದ ರಿಯಾಜ್ ಮತ್ತು ಫೈಝಲ್ ಬಂದು ಕಟ್ಟಿಗೆಯಿಂದ ಹಲ್ಲೆ ನಡೆಸಿದರು. ಬಳಿಕ ಫೋನ್ನಲ್ಲಿದ್ದ ಗೂಗಲ್ ಪೇ ಪಿನ್ ನಂಬರ್ ಪಡೆದು 82,000 ರೂ.ಗಳನ್ನು ಆರೋಪಿಗಳ ಪತ್ನಿಯರ ಹೆಸರಿನ ಖಾತೆಗೆ ವರ್ಗಾಯಿಸಿ ಮೊಬೈಲ್ ಮತ್ತು ಅಂಗಳದಲ್ಲಿ ನಿಲ್ಲಿಸಿದ್ದ 2,82,000 ರೂ. ಮೌಲ್ಯದ ತ್ರಿಚಕ್ರ ವಾಹನ (ಕೆಎ-21,ಸಿ-3580)ವನ್ನು ಕಳವು ಮಾಡಿರುವುದಾಗಿ ಜುವಾಮ್ ಗೋವಿಯಸ್ ದೂರು ನೀಡಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.