ಬೆಳ್ತಂಗಡಿ: ಸೋಮಾವತಿ ಹೊಳೆಗೆ ಕಿಡಿಗೇಡಿಗಳಿಂದ ವಿಷ… ಸಾವಿರಾರು ಮೀನುಗಳ ಮಾರಣಹೋಮ
Team Udayavani, Apr 28, 2023, 6:42 AM IST
ಬೆಳ್ತಂಗಡಿ: ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿರುವ ಸೋಮಾವತಿ ಹೊಳೆ ನೀರಿಗೆ ಕಿಡಿಗೇಡಿಗಳು ರಾಸಾಯನಿಕ ಪದಾರ್ಥ ಹಾಕಿರುವ ಪರಿಣಾಮ ಸಾವಿರಾರು ಮೀನುಗಳ ಸತ್ತುಬಿದ್ದಿರುವ ಘಟನೆ ಎ.27ರಂದು ನಡೆದಿದೆ.
ಮುಂಜಾನೆ 5.30ರ ಸುಮಾರಿಗೆ ನಗರಕ್ಕೆ ನೀರು ಸರಬರಾಜು ಮಾಡುವ ಸಿಬಂದಿ ಫ್ರಾನ್ಸಿಸ್ ಅವರು ಸೋಮಾವತಿ ನದಿಯಲ್ಲಿರುವ ಘಟಕಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಪಂಪ್ಹೌಸ್ ಇರುವ ನೀರಿನ ಘಟಕದ ಸುತ್ತ ಸಾವಿರಾರು ಮೀನುಗಳು ಸತ್ತುಬಿದ್ದಿದ್ದವು. ತತ್ಕ್ಷಣ ಅವರು ಪ.ಪಂ. ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ಗೆ ಮಾಹಿತಿ ನೀಡಿದ್ದು, ನದಿಯಿಂದ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಯಿತು.
ಈಗಾಗಲೆ ನದಿಗಳು ಬತ್ತಿಹೋಗಿರುವುದರಿಂದ ಕುಡಿಯುವ ನೀರಿಗೆ ಕೊಳವೆಬಾವಿಯನ್ನೇ ಆಶ್ರಯಿಸುವ ಅನಿವಾರ್ಯತೆ ಎದುರಾಗಿದೆ. ಬೆಳ್ತಂಗಡಿ ಪಟ್ಟಣದ 11 ವಾರ್ಡುಗಳಿಗೆ ದಿನವೊಂದಕ್ಕೆ 10 ಲಕ್ಷ ಲೀಟರ್ ನೀರು ಅಗತ್ಯವಿದ್ದು, ಸೋಮವಾತಿ ನದಿಯಿಂದ ಪ್ರಸಕ್ತ 6ರಿಂದ 7 ಲಕ್ಷ ಲೀಟರ್ ಪಡೆಯಲಾಗುತ್ತಿತ್ತು. ಉಳಿದಂತೆ ಕೊಳವೆಬಾವಿಯಿಂದ ಸರಬರಾಜು ಮಾಡಲಾಗುತ್ತಿದೆ. ಈಗ ನದಿಯಿಂದ ನೀರು ಸರಬರಾಜು ಮಾಡಲಾಗದ ಕಾರಣ ತೊಂದರೆ ಎದುರಾಗಿದೆ.
ಮೂರು ವರ್ಷಗಳ ಹಿಂದೆಯೂ ಕಿಡಿಗೇಡಿಗಳು ಇದೇ ಸ್ಥಳದಲ್ಲಿ ಬೇಸಗೆಯಲ್ಲಿ ನೀರಿಗೆ ರಾಸಾಯನಿಕ ಹಾಕಿದ್ದ ಪರಿಣಾಮ ಮೀನುಗಳು ಸತ್ತು ಬಿದ್ದಿದ್ದವು. ಪ.ಪಂ. ಮುಖ್ಯಾಧಿಕಾರಿ ನಟರಾಜ್ ಅವರು ಘಟನೆ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.