ಉಪ್ಪಿನಂಗಡಿ: ವಿದ್ಯುತ್ ಪ್ರವಹಿಸಿ ಕಂಬದಿಂದ ಬಿದ್ದು ಮೆಸ್ಕಾಂ ಸಿಬ್ಬಂದಿ ಸಾವು
Team Udayavani, Jun 27, 2020, 11:33 AM IST
ಉಪ್ಪಿನಂಗಡಿ: ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿಯೋರ್ವರು ವಿದ್ಯುತ್ ಆಘಾತದ ಕಾರಣ ಕಂಬದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಕಲ್ಲೇರಿ ಬಳಿ ಶನಿವಾರ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಮೂಲದ ಬಸವರಾಜ್ ಕಟ್ಟಪರ (25) ಎಂಬಾತನೇ ಮೃತ ದುರ್ದೈವಿ.
ಶನಿವಾರ ಬೆಳಗ್ಗೆ ಪಿಲಿಗೂಡು ಹುಣಸೆ ಕಟ್ಟೆ ಎಂಬಲ್ಲಿನ ಕಂಬದಲ್ಲಿ ವಿದ್ಯುತ್ ಸಮಸ್ಯೆ ಇದ್ದ ಕಾರಣ ಬಸವರಾಜ ಕಂಬವೇರಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಕಂಬದಿಂದ ಬಿದ್ದರು ಎನ್ನಲಾಗಿದೆ. ಕೂಡಲೇ ಇವರನ್ನು ಉಪ್ಪಿನಂಗಡಿಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾದರೂ, ಮಾರ್ಗಮಧ್ಯೆ ಸಾವನ್ನಪ್ಪಿದರು ಎಂದು ವರದಿಯಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಮೂಲದವರಾದ ಬಸವರಾಜ್ ಕಳೆದ ನಾಲ್ಕುವರೆ ವರ್ಷಗಳಿಂದ ಕಲ್ಲೇರಿಯ ಮೆಸ್ಕಾಂ ಕೇಂದ್ರದಲ್ಲಿ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.